ಆಲೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿರುವ 25 ಆನೆ ಹಿಡಿಯಲು ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್, ಈ ಭಾಗದಲ್ಲಿ ಸಂರಕ್ಷಿತ ಅರಣ್ಯ ಇಲ್ಲದೇ ಇರುವುದರಿಂದಾಗಿ ಕಾಡಾನೆ ಹಾವಳಿ ಹೆಚ್ಚಿದೆ ಎಂದೂ ಸಹ ಹೇಳಿದರು.
ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದ ನೀಲಬಾನು ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ರೈತರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಆನೆ ದಾಳಿಯಿಂದ ಮೃತಪಟ್ಟವರಿಗೆ 2ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಅದನ್ನು 5ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಒಂದು ಎಕರೆಗೆ 25 ಸಾವಿರದಷ್ಟು ಪೂರ್ಣ ಪ್ರಮಾಣದ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಅರಣ್ಯಧಿಕಾರಿಗಳನ್ನು ಪಶ್ಚಿಮ ಬಂಗಾಳಕ್ಕೆ ಕಳಿಸಿ ಅಲ್ಲಿ ಕಾಡಾನೆ ಸಮಸ್ಯೆಗೆ ಅನುಸರಿಸುತ್ತಿರುವ ಮಾರ್ಗೋಪಾಯ ತಿಳಿದುಕೊಳ್ಳಲಾಗುವುದು. ಮಾನವ ಸಂಘರ್ಷ ತಪ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್ ಮಾತನಾಡಿ, ಹೇಮವತಿ ಜಲಾಶಯ ನಿರ್ಮಾಣ ಹಾಗೂ ಅರಣ್ಯ ಒತ್ತುವರಿಯಿಂದಾಗಿ ಕಾಡಾನೆಗಳಿಗೆ ಶಾಶ್ವತ ನೆಲೆ ಇಲ್ಲದಾಗಿದೆ. ಆಹಾರ ಅರಸಿಕೊಂಡು ಕಾಡಾನೆಗಳು ಈ ಭಾಗಕ್ಕೆ ದಾಳಿ ಇಡುತ್ತಿದ್ದು, ಇದರಿಂದಾಗಿ ಸಮಸ್ಯೆ ಉಲ್ಬಣಿಸಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಬಿ.ಆರ್. ಗುರುದೇವ್, ಪರಿಸರವಾದಿ ಪ್ರೇಮಾಹೆಮ್ಮಿಗೆ ಮೋಹನ್, ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ, ಅರಣ್ಯ ಸಮಿತಿ ಅಧ್ಯಕ್ಷ ಎಚ್.ಪಿ.ಜಗದೀಶ್ ಮಾತನಾಡಿದರು.