ಹಿರೇಕೆರೂರು: ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಪ.ಪಂ ಸದಸ್ಯೆ ವಿಜಯಶ್ರೀ ಬಂಗೇರ ಅವಿರೋಧವಾಗಿ ಆಯ್ಕೆಯಾದರು.
ಕುಸುಮಾ ಬಣಕಾರ ಅವರ ರಾಜೀನಾಮೆಯಿಂದ ಉಪಾಧ್ಯಕ್ಷ ಸ್ಥಾನ ತೆರವುಗೊಂಡಿತ್ತು. ಗುರುವಾರ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಶ್ರೀ ಬಂಗೇರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ವಿಜಯಶ್ರೀ ಬಂಗೇರ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.
ನೂತನ ಉಪಾಧ್ಯಕ್ಷರಿಗೆ ಪ.ಪಂ. ಸದಸ್ಯರು ಹಾಗೂ ಸಿಬ್ಬಂದಿ ಶುಭ ಕೋರಿದರು. ನೂತನ ಉಪಾಧ್ಯಕ್ಷೆ ವಿಜಯಶ್ರೀ ಬಂಗೇರ ಚುನಾವಣೆಯಲ್ಲಿ ಸಹಕರಿಸಿದ ಪ.ಪಂ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಪ.ಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಕಂದಾಯ ನಿರೀಕ್ಷಕ ನಟರಾಜ, ಪ.ಪಂ. ಅಧ್ಯಕ್ಷ ಕಂಠಾಧರ ಅಂಗಡಿ, ಮಾಜಿ ಉಪಾಧ್ಯಕ್ಷೆ ಕುಸುಮಾ ಬಣಕಾರ ಹಾಗೂ ಸದಸ್ಯರು ಹಾಜರಿದ್ದರು.