ಹಾವೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ನಗರ ಘಟಕದಿಂದ ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ನಗರಸಭೆ ಸದಸ್ಯ ಎ.ಎಂ.ಜಮಾದಾರ್ ಮಾತನಾಡಿ, ‘ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗುವುದಕ್ಕೆ ಲಾಯಕ್ಕಿಲ್ಲ. ಸಂಸ್ಕೃತಿ ಇಲ್ಲದ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ, ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು ಎಂದರು.
ಓಟು ಹಾಗೂ ಸೀಟಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರ ಬೂಟು ಬೇಕಾದರೂ ನೆಕ್ಕುತ್ತಾರೆ ಎಂದು ಹೇಳುವ ಮೂಲಕ ಕೇಂದ್ರ ಸಚಿವರೇ ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಕೇಂದ್ರ ಸಚಿವರಾಗಿದ್ದುಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಧ್ಯ ಸಮನ್ವಯ ಸಾಧಿಸುವ ಬದಲು, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸಿದ್ದು ಪುರದ ಮಾತನಾಡಿ, ಜನರಿಂದ ಆಯ್ಕೆಯಾಗಿ ಉನ್ನತ ಸ್ಥಾನದಲ್ಲಿರುವ ಕೇಂದ್ರ ಸಚಿವ ಹೆಗಡೆ ಇಷ್ಟು ಕೀಳು ಮಟ್ಟದಲ್ಲಿ ಮಾತನಾಡುವುದು ಅವರ ವ್ಯಕ್ತಿತ್ವ ಹಾಗೂ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ಇದು ಅವರ ಸಂಸ್ಕೃತಿಯನ್ನು ಸೂಚಿಸುತ್ತದೆ’ ಎಂದರು. ‘ಅನಂತಕುಮಾರ್ ಹೆಗಡೆಗೆ ತಲೆಕೆಟ್ಟಿದ್ದು ಭಂಡ ಸಚಿವರಾಗಿದ್ದಾರೆ. ಆದ್ದರಿಂದ, ಅವರನ್ನು ದೇಶದಿಂದಲೇ ಗಡೀಪಾರು ಮಾಡಬೇಕು’ ಎಂದರು.
ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಉಪಾಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ‘ಸಚಿವ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದರಿಂದ ಬಹಿರಂಗವಾಗಿಯೇ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯಕ್ಕೆ ಕೆಟ್ಟ ಹೆಸರು ತರುವ ಇಂತಹ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡಬಾರದು. ಜನತೆ ಇಂತಹವರನ್ನು ಸೋಲಿಸಬೇಕು’ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕ್ ಸಾಬ್ ಬಾಣಿ, ಕಾಂಗ್ರೆಸ್ ಮುಖಂಡರಾದ ಮಲ್ಲೇಶಪ್ಪ ಸವಣೂರ, ದಾದಾ ಖಲಂದರ್, ಶಾಹಿದ್ ದೇವಿಹೊಸೂರು, ಅಭಿಷೇಕ ಬೆಟಗೇರಿ, ಸಿ.ಎಸ್.ಲಕ್ಷ್ಮೇಶ್ವರಮಠ, ಸುನೀಲ ಜಮಾದಾರ, ವಿನಯ ಪಾಲನಕರ, ಅತಾವುಲ್ಲಾ ಖಾಜಿ, ಜಮೀರ್ ಜಿಗರಿ, ಮಲ್ಲಿಕಾರ್ಜುನ ಬೂದಗಟ್ಟಿ, ರಾಜು ಶೀವಣ್ಣನವರ, ಶ್ರೀಧರ ಗಡ್ಡದ, ನವೀದ, ಅಲ್ತಾಫ್ ಚೋಪದಾರ, ಮೂರ್ತಿ ಕರ್ಜಗಿ, ಜಾಫರ್ ಅತ್ತಾರ, ರವಿ ದೊಡ್ಮನಿ , ರವಿ ಬಾಲಣ್ಣನವರ, ಶಾಹಬಾಜ್ ಕುಲಕರ್ಣಿ, ರಮೇಶ ಪುಟ್ಟಣ್ಣನವರ, ಸೈಯ್ಯದ್ ಹುಸೇನ್ ಜಮಾದಾರ್, ಮುತ್ತು ಕೊರವರ, ಇಮಾಮ್ ಮುಗದೂರ ಹಾಗೂ ಜಿಲಾನಿ ಮುಲ್ಲಾ ಇದ್ದರು.
* *
ಸಚಿವ ಹೆಗಡೆ ಅವರು ಕೇಂದ್ರದ ಮನವೊಲಿಸಿ ರಾಜ್ಯಕ್ಕೆ ಮಹದಾಯಿ ನೀರು ತರು ಬದಲಾಗಿ, ಕೀಳುಮಟ್ಟದಲ್ಲಿ ಮಾತನಾಡುವ ಮೂಲಕ ರಾಜ್ಯದ ಮಾನ ಹರಾಜು ಹಾಕಲು ಯತ್ನಿಸುತ್ತಿದ್ದಾರೆ
ಅಬ್ದುಲ್ ರಜಾಕ್ ಜಮಾದಾರ್
ನಗರಸಭೆ ಸದಸ್ಯರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.