ಕಲಬುರ್ಗಿ: ‘ಆಧುನಿಕ ಯುಗದಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದ್ದು, ಬಹುತೇಕ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಹಣಗಳಿಕೆಯಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲಾಗಳಂತೂ ಉಳ್ಳವರ ಸ್ವರ್ಗವಾಗಿವೆ’ ಎಂದು ಕ್ಲಸ್ಟರ್ ಉತ್ತರ ವಲಯದ ಸಿಆರ್ಪಿ ಮಲ್ಲಿನಾಥ ಆರ್.ಪಾಟೀಲ ಹೇಳಿದರು.
ಇಲ್ಲಿನ ಹನುಮಾನ ಮಂದಿರದ ಆವರಣದಲ್ಲಿ ಈಚೆಗೆ ಹಮ್ಮಿಕೊಳಡಿದ್ದ ಯಶಸ್ವಿನಿ ವಿದ್ಯಾಮಂದಿರ ಶಿಶು ವಿಹಾರ ಪೂರ್ವ ಮತ್ತು ಪ್ರಾಥಮಿಕ ಶಾಲೆ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬಡವರ, ನಿರ್ಗತಿಕರ ಮಕ್ಕಳಿಗೆ ಶಿಕ್ಷಣ ಕೊಡುವುದು ಕನಸಿನ ಮಾತಾಗಿದೆ. ಇದಕ್ಕೆ ಅಪವಾದವೆಂಬಂತೆ ಕೆಲವೆ ಕೆಲವು ಶಿಕ್ಷಣ ಸಂಸ್ಥೆಗಳು ಜ್ಞಾನಾರ್ಜನೆಯನ್ನು ಮೂಲ ಉದ್ದೇಶವನ್ನಾಗಿಸಿಕೊಂಡಿದೆ’ ಎಂದರು.
‘ಒಂದು ಶಾಲೆ ಯಶಸ್ವಿಯಾಗಿ ಸಾಗಬೇಕಾದರೆ ಇಲಾಖೆ ಮತ್ತು ಪಾಲಕರ ಜತೆ ಉತ್ತಮವಾದ ಸಂಬಂಧ ಹೊಂದಿರಬೇಕಾಗುತ್ತದೆ. ಜೊತೆಗೆ ಶಿಕ್ಷಕರು ಪಠ್ಯಬೋಧನೆಯ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು’ ಎಂದು ಹೇಳಿದರು.