ಗದಗ: ನಗರದ 1 ಮತ್ತು 4ನೇ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಚ್.ಕೆ. ಪಾಟೀಲ ಭೂಮಿಪೂಜೆ ಯನ್ನು ನೆರವೇರಿಸಿದರು. ವಸಂತ ಸಿಂಗ್ ಜಮಾದಾರ್ ಕಾಲೊ ನಿಯಲ್ಲಿ ₹ 85 ಲಕ್ಷ ವೆಚ್ಚದ ಈಜುಕೊಳ, ಎಸ್.ಎಂ.ಕೃಷ್ಣ ನಗರದಲ್ಲಿ ₹ 38 ಲಕ್ಷ ವೆಚ್ಚದ ಹೈಟೆಕ್ ಗೌರವ ಘಟಕ, ₹ 25 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ₹ 10.35 ಲಕ್ಷ ವೆಚ್ಚದ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡಿದರು.
‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಜೀವನಾವಶ್ಯಕ ಸೌಲಭ್ಯ ದೊರಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಯೋಜನೆ ಪರಿಕಲ್ಪನೆ ಬದಲಾಯಿಸಿದೆ. ಬೆವರು ಸುರಿಸಿ ದುಡಿಯುವ ಜನತೆಗೆ ಉತ್ತಮ ಸೌಲಭ್ಯ ಒದಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಅವರು ಹೇಳಿದರು.
ಗದುಗಿನ ಒಟ್ಟು 5 ಸ್ಥಳಗಳಲ್ಲಿ ಈಜುಕೊಳ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರ 4ನೇ ವಾರ್ಡ್ ನಲ್ಲಿ ಹೈಟೆಕ್ ಗೌರವ ಘಟಕ ನಿರ್ಮಿಸ ಲಾಗುತ್ತದೆ’ ಎಂದು ತಿಳಿಸಿದರು. ನಂತರ ನಗರಸಭೆಯ ಅಭಿವೃದ್ಧಿ ಹೊಂದಿದ 11 ಕಿ.ಮೀ. ಜೋಡಿ ರಸ್ತೆ ಮದ್ಯದಲ್ಲಿ ಹಸಿರೀಕರಣಗೊಳಿಸಲು ಹಳೆಯ ಜಿಲ್ಲಾಧಿಕಾರಿ ವೃತ್ತದಲ್ಲಿ ಚಾಲನೆ ನೀಡಿದರು.
ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜು ನಾಥ, ಪೌರಾಯುಕ್ತ ಮನ್ಸೂರ್ ಅಲಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಅನಿಲ ಗರಗ, ಗುರಣ್ಣ ಬಳಗಾನೂರ, ಜಿ.ಎಸ್.ಗಡ್ಡದೇವರಮಠ, ಗಣೇಶಸಿಂಗ್ ಬ್ಯಾಳಿ, ಜೆ.ಕೆ.ಜಮಾದಾರ ಇದ್ದರು.