ಕಲಬುರಗಿ: ‘ಜೆ.ಆರ್.ಫಿಲ್ಮಸ್ ಹಾಗೂ ಪಿಜಿಬಿ ಅಡಿಯಲ್ಲಿ ಸೆಟ್ಟೇರಲಿರುವ ವೆಬ್ ಸರಣಿಗಾಗಿ ಸ್ಥಳೀಯ ಕಲಾವಿದರ ಆಯ್ಕೆಗೆ ನಗರದ ಎನ್.ವಿ.ಬಾಲಕರ ಪ್ರೌಢಶಾಲೆಯಲ್ಲಿ ಜೂನ್ 2ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ತನಕ ಆಡಿಷನ್ ಹಮ್ಮಿಕೊಳ್ಳಲಾಗಿದೆ’ ಎಂದು ವೆಬ್ ಸರಣಿಯ ಯುವ ನಿರ್ದೇಶಕ ದಯಾನಂದ ರೇವಣಸಿದ್ದಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ವೆಬ್ ಸರಣಿಗಾಗಿ ನಮಗೆ 25ರಿಂದ 28 ವರ್ಷದೊಳಗಿನ ನಾಯಕ, ನಾಯಕಿ, ಪೋಷಕ ಪಾತ್ರಕ್ಕೆ 35ರಿಂದ 50 ವರ್ಷದೊಳಗಿನ ಮಹಿಳಾ ಕಲಾವಿದರು, 35ರಿಂದ 60 ವರ್ಷಗೊಳಗಿನ ಪುರುಷ ಕಲಾವಿದರು ಬೇಕಾಗಿದ್ದಾರೆ. ಸ್ಥಳೀಯ ಭಾಗದ ಕಲಾವಿದರು ಹಾಗೂ ಜಿಲ್ಲೆಯ ವಿವಿಧ ತಾಣಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.
‘ನಾನು ಈಗಾಗಲೇ 8 ಶಾರ್ಟ್ ಮೂವಿಗಳನ್ನು ಮಾಡಿದ್ದು, ವೆಬ್ ಸರಣಿ ವಿಭಾಗದಲ್ಲಿ ಇದು ನನ್ನ ಮೊದಲ ಪ್ರಯತ್ನ. ಐದು ಭಾಗಗಳಲ್ಲಿ ವೆಬ್ ಸರಣಿ ಮೂಡಿಬರಲಿದ್ದು, ತಮಿಳುನಾಡಿನ ವ್ಯಕ್ತಿಯೊಬ್ಬರು ನಿರ್ಮಾಪಕರಾಗಿದ್ದಾರೆ. ಜಿಲ್ಲೆಯ ಕಾಳಗಿ, ಸುಗೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣಕ್ಕೆ ಯೋಜಿಸಲಾಗಿದೆ’ ಎಂದರು.
‘ಗ್ರಾಮ ದೇವತೆಯನ್ನು ಕಳೆದುಕೊಂಡಿರುವ ಒಂದು ರಹಸ್ಯ ಜನಾಂಗ ಹಾಗೂ ಅದನ್ನು ಕಾಪಾಡುತ್ತಿರುವ ಇನ್ನೊಂದು ರಹಸ್ಯ ಜನಾಂಗದ ಕಥೆ ವೆಬ್ ಸರಣಿಯಲ್ಲಿ ಇರಲಿದೆ. ಇದರೊಂದಿಗೆ ಹಾಸ್ಯವೂ ಇರಲಿದೆ’ ಎಂದು ಚಿತ್ರ ಕಥೆ ಬರೆದಿರುವ ಅಲೋಕ ಬುದ್ಧಾನಂದ ತಿಳಿಸಿದರು.