ಕಲಬುರಗಿ: ‘ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನದ ಸಂತ. ಅವರು ಸಮಾನತೆಯ ಸಂವಿಧಾನದ ಕೊಡುಗೆ ನೀಡದಿದ್ದರೆ ನಮ್ಮ ಬದುಕು, ಬಾಳು ಕತ್ತಲಾಗಿರುತ್ತಿತ್ತು’ ಎಂದು ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಸಂಸ್ಥಾನ ಮಠದ ರೇವಣಸಿದ್ದ ಶಿವಾಚಾರ್ಯರು ನುಡಿದರು.
ನಗರದ ಅನ್ನಪೂರ್ಣ ಕ್ರಾಸ್ನಲ್ಲಿರುವ ಕಲಾ ಮಂಡಳದಲ್ಲಿ ಶುಕ್ರವಾರ ಪಾಳಾದ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾನತಾ ಸಂಕಲ್ಪ ದಿನ, ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಡಾ.ಅಂಬೇಡ್ಕರ್ ಅವರು ವ್ಯಕ್ತಿ, ಧರ್ಮದ ಮೇಲೆ ಸಂವಿಧಾನ ರಚನೆ ಮಾಡಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ನ್ಯಾಯ ಸಿಗುವಂತಹ ಸಂವಿಧಾನ ಕೊಟ್ಟಿದ್ದಾರೆ. ಅವರ ವಿಚಾರಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ತಿಳಿಸಬೇಕು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಸಿಪಿ ಡಿ.ಜೆ.ರಾಜಣ್ಣ, ‘ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ನಮ್ಮ ಕರ್ತವ್ಯ ಮತ್ತು ಹಕ್ಕುಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು. ಸಾಹಿತಿ ಗೌರಿ ಪಾಟೀಲ ಮಾತನಾಡಿ, ‘ಮಕ್ಕಳಿಗೆ ಮನೆಯಿಂದಲೇ ಸಮಾನತೆಯ ಬಗ್ಗೆ ಹೇಳಿಕೊಡಬೇಕು’ ಎಂದರು.
ಚಿಂತಕ ಪ್ರೊ.ಯಶ್ವಂತರಾಯ ಅಷ್ಠಗಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ಕರ್ನಾಟಕ ಸಮತಾ ಸೈನಿಕ ದಳ ವಿಭಾಗೀಯ ಅಧ್ಯಕ್ಷ ಸಂಜೀವ ಟಿ.ಮಾಲೆ, ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಉಪಸ್ಥಿತರಿದ್ದರು. ಅಂಬಾರಾಯ ಮಡ್ಡೆ ನಿರೂಪಣೆ ಮಾಡಿದರು.
ಸಮಾನತಾ ರತ್ನ ಪ್ರಶಸ್ತಿ ಪ್ರದಾನ: ವಕೀಲ ಬಾಬುರಾವ್ ಜಾಧವ, ನಿವೃತ್ತ ಪತ್ರಾಂಕಿತ ಅಧಿಕಾರಿ ಶ್ರೀಮಂತ ಎಂ.ಕೋಟ್ರೆ, ಎಎಸ್ಐ ಅಣ್ಣಪ್ಪ ಎಸ್.ಜಿ., ಜಾನಪದ ಕ್ಷೇತ್ರದ ಚಂದ್ರಕಲಾ ಬಂಡೆ, ಬಸವತತ್ವ ಪ್ರಚಾರಕ ಉದಯಕುಮಾರ ಜಿ.ಸಾಲಿ, ಪತ್ರಕರ್ತ ಹಣಮಂತರಾವ ಬೈರಾಮಡಗಿ, ಬಸವತತ್ವ ಪಾಲಕ ಶಿವಶರಣಪ್ಪ ದೇಗಾಂವ, ದಲಿತ ಮುಖಂಡ ಲೋಹಿತ್ ಕಟ್ಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮಹಾದೇವಿ ಕೆಸರಟಗಿ, ಕೃಷಿ ಕ್ಷೇತ್ರದ ಮಲ್ಲಿಕಾರ್ಜುನ ಎ.ವಠಾರ ಅವರಿಗೆ ‘ಸಮಾನತಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನಂತರ ಸಾಹಿತಿ ಕೆ.ಗಿರಿಮಲ್ಲ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಶಯ ನುಡಿ ಹೇಳಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ, ‘ಕಾವ್ಯಗಳಲ್ಲಿ ಬರಗಾಲ ಕಾಡುತ್ತಿದೆ. ಕಾರಣ ಇಷ್ಟೇ, ಇಲ್ಲಿ ಗಿಡ–ಮರಗಳಿಲ್ಲ. ಪರಿಸರ ಇಲ್ಲ’ ಎಂದರು. ಪ್ರಮುಖರಾದ ಸುರೇಶ ಬಡಿಗೇರ, ಬಾಬುರಾವ ಶೇರಿಕಾರ್, ಮೃತ್ಯುಂಜಯ ಪತಂಗೆ, ನಾಗಣ್ಣ ರಾಂಪುರೆ, ಜಗದೇವಿ ಚಟ್ಟಿ ಉಪಸ್ಥಿತರಿದ್ದರು. ಸಂಗಣ್ಣ ಎಂ.ಸಿಂಗೆ, ರಾಜಶೇಖರ ಮಾಂಗ್, ಮಾಲಾ ಕಣ್ಣಿ ಸೇರಿದಂತೆ 14 ಕವಿಗಳು ಕವನ ವಾಚನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.