ಚಿಂಚೋಳಿ: ತಾಲ್ಲೂಕಿನಲ್ಲಿ ಚಿಯಾ ಬೇಸಾಯದ ಮೂಲಕ ರೈತರೊಬ್ಬರು ಗಮನ ಸೆಳೆದಿದ್ದಾರೆ. ಕೆರೊಳ್ಳಿ ಗ್ರಾಮದ ಪ್ರಗತಿಪರ ರೈತ ಸೋಮಶೇಖರ ಸೂರವಾರ ಅಪರೂಪದ ಚಿಯಾ ಬೆಳೆ ಬೇಸಾಯ ನಡೆಸುತ್ತಿದ್ದಾರೆ.
ಮೈಸೂರಿನಿಂದ ಚಿಯಾ ಬೀಜ ತರಿಸಿಕೊಂಡು ತಮ್ಮ 4.28 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದು, ಬೆಳೆ ಹುಲುಸಾಗಿ ಬಂದಿದೆ.
ಕಪ್ಪು ಮಣ್ಣಿನ ಜಮೀನಿನಲ್ಲಿ ಈ ಬೆಳೆ ಉತ್ತಮ ಬೆಳವಣಿಗೆ ಮೂಲಕ ನಳನಳಿಸಿದರೆ, ಸದ್ಯ ಹೂವಾಡುವ ಅಂತಿಮ ಹಂತ ತಲುಪಿದೆ. ಈ ಬೆಳೆ ಅವಧಿಯು ಮೂರೂವರೆ ತಿಂಗಳಾಗಿದ್ದು, ಅಕ್ಟೋಬರ್ನಲ್ಲಿ ಬಿತ್ತನೆ ಮಾಡಲಾಗಿದೆ. ರೈತ ಸೋಮಶೇಖರ ಜನವರಿಯಲ್ಲಿ ರಾಶಿ ಮಾಡಲಿದ್ದಾರೆ.
ಆರೋಗ್ಯಕ್ಕೆ ಪೂರಕವಾಗಿರುವ ಈ ಕಾಳುಗಳು ಔಷಧಿಯ ಗುಣಗಳನ್ನು ಹೊಂದಿವೆ. ಪ್ರತಿ ಕ್ವಿಂಟಲ್ಗೆ ಮಾರುಕಟ್ಟೆಯಲ್ಲಿ ₹25 ಸಾವಿರಕ್ಕಿಂತಲೂ ಹೆಚ್ಚು ದರ ದೊರೆಯುವ ನಿರೀಕ್ಷೆ ಹೊಂದಿದ್ದಾರೆ.
‘ಬೆಳೆಯ ನಿರ್ವಹಣೆಗೆ ಹೆಚ್ಚಿನ ಖರ್ಚಿಲ್ಲ. ಎಕರೆಗೆ ಕನಿಷ್ಠ 3ರಿಂದ 5 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ತಾಲ್ಲೂಕಿನಲ್ಲಿ ಬಹುತೇಕ ರೈತರು ತೊಗರಿ, ಉದ್ದು, ಹೆಸರು, ಸೋಯಾ ಮೊದಲಾದ ಸಾಂಪ್ರದಾಯಿಕ ಬೆಳೆ ಬೇಸಾಯ ಮಾಡಿದ್ದಾರೆ. ಆದರೆ ನಾನು ಬೇರೆ ಬೆಳೆ ಬೇಸಾಯ ಮಾಡಲು ಯೋಚಿಸಿ ಚಿಯಾ ಕೃಷಿ ಮಾಡುತ್ತಿದ್ದೇನೆ’ ಎಂದು ಸೋಮಶೇಖರ ಸೂರವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಾಲ್ಲೂಕಿನಲ್ಲಿ ವಿರಳವಾದ ಚಿಯಾ ಬೇಸಾಯ ಅಲ್ಪಾವಧಿಯ ಉತ್ತಮ ಲಾಭ ತರುವ ಬೆಳೆಯಾಗಿದ್ದು, ಭವಿಷ್ಯದಲ್ಲಿ ಹೆಚ್ಚಿನ ರೈತರು ಚಿಯಾದತ್ತ ಹೊರಳಿದರೂ ಅಚ್ಚರಿಯಿಲ್ಲ. ಬೀಜ, ಗೊಬ್ಬರ, ಬಿತ್ತನೆ, ಕಳೆ ಕೀಳುವ ಹಾಗೂ ನೀರು ಬಿಡುವ ಮತ್ತು ಕಾವಲಿನ ಖರ್ಚು ಮಾತ್ರ ಇದೆ. ಕಪ್ಪು ಹಾಗೂ ಕೆಂಪು ಮಣ್ಣು ಎರಡರಲ್ಲೂ ಬೇಸಾಯ ನಡೆಸಬಹುದಾದ ಚಿಯಾ ತಾಲ್ಲೂಕಿನಲ್ಲಿ ಹೊಸ ಸಾಧ್ಯತೆ.
ಸೋಮಶೇಖರ ಸೂರವಾರ ಸಂಪರ್ಕ ಸಂಖ್ಯೆ: 9972259343.