ಕಲಬುರಗಿ: ‘ನಗರದ ಬಹಮನಿ ಕೋಟೆಯಲ್ಲಿ ಪಾಳು ಬಿದ್ದಿರುವ ಸ್ವಯಂಭೋ ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಮಾಡಬೇಕು. ಅಲ್ಲಿ ಸೋಮೇಶ್ವರ ಲಿಂಗ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಭಾರತೀಯ ಪುರಾತತ್ವ ಇಲಾಖೆ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ‘ಬಹುಮನಿಯವರು ಬರುವ ಮುಂಚೆಯೇ ಕಲಬುರಗಿಯ ಪುರಾತನ ಕೋಟೆಯಲ್ಲಿ ಹಿಂದೂ ಅರಸರು ಸ್ವಯಂಭೋ ಸೋಮೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಕೋಟೆಯಲ್ಲಿ ದೇವಸ್ಥಾನ ಇರುವ ಬಗ್ಗೆ ನಾಗಹಳ್ಳಿಯ ಶಾಸನದಲ್ಲಿ ಉಲ್ಲೇಖ ಇದೆ. ನಿಜಾಮರ ಆಡಳಿತದಲ್ಲಿ ಈ ದೇಗುಲವನ್ನು ದ್ವಂಸ ಮಾಡಲಾಗಿದೆ. ದೇಗುಲವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.
‘ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ದೇವಸ್ಥಾನ ಬಳಿ ಹೋಗಿ ಸಂಪೂರ್ಣ ಮಾಹಿತಿ ಪಡೆದು ಜೀರ್ಣೋದ್ಧಾರಕ್ಕೆ ಕ್ರಮ ತೆಗೆದುಕೊಳ್ಳಬೇಕು. ನಗರದ ಹಿಂದೂ ಜನರಿಗೆ ಸೋಮೇಶ್ವರ ಲಿಂಗ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಬೇಕು. ದೇಗುಲ ಸುತ್ತಲು ಬೆಳೆದಿರುವ ಗಿಡ–ಗಂಟೆಗಳನ್ನು ಒಂದು ವಾರದ ಒಳಗೆ ತೆರವು ಮಾಡಿ ಜನರಿಗೆ ಅಲ್ಲಿ ಹೋಗಿ ಬರಲು ಅನುಕೂಲ ಮಾಡಿ ಕೊಡಬೇಕು’ ಎಂದು ಕೋರಿದರು.
‘ನಮ್ಮ ಮನವಿಯನ್ನು ಗಂಬೀರವಾಗಿ ಪರಿಗಣಿಸದಿದ್ದರೆ ಎಲ್ಲ ಹಿಂದೂ ಪರ ಸಂಘಟನೆ, ಹಿಂದೂ ಮುಖಂಡರ ನೇತೃತ್ವದಲ್ಲಿ ನಾವೇ ದೇವಸ್ಥಾನ ಸುತ್ತ ಸ್ವಚ್ಛ ಮಾಡಿ ಶಿವರಾತ್ರಿ ದಿನ ಲಿಂಗ ಪ್ರತಿಷ್ಠಾಪನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿದ್ದು ಕಂದಗಲ್ಲ, ದಶರಥ ಇಂಗೋಳೆ, ಸಂಗಮೇಶ ಎಸ್.ಕಾಳಗನೂರ, ಮಾಹಾದೇವ ಕೋಟನೂರ, ರಾಜು ಕಮಲಾಪುರೆ, ರಾಜು ಸ್ವಾಮಿ, ರಾಕೇಶ ಮಠ, ಚಿದಾನಂದ ಸ್ವಾಮಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.