ಕಲಬುರಗಿ: ಇಂದಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಿದ್ದು, ಮಧ್ಯ ವಯಸ್ಕರೇ ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುನೈಟೆಡ್ ಆಸ್ಪತ್ರೆ ಕೈಗೊಂಡಿರುವ ಹೃದಯ ಆರೋಗ್ಯ ಉಚಿತ ತಪಾಸಣೆ ಶಿಬಿರ ಔಚಿತ್ಯಪೂರ್ಣ ಎಂದು ನಗರ ಪೊಲೀಸ್ ಕಮಿಷನರ್ ಚೇತನ್ ಆರ್. ಹೇಳಿದರು.
ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಸೋಮವಾರ 12ನೇ ವಾರ್ಷಿಕೋತ್ಸವದ ನಿಮಿತ್ತ ಕೈಗೊಂಡಿದ್ದ ಹೃದಯದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಯಾರೊಬ್ಬರೂ ನಿರ್ಲಕ್ಷಿಸಬಾರದು. ಶೀಘ್ರ ಚಿಕಿತ್ಸೆ ಪಡೆದು ಆರೋಗ್ಯವಾಗಿರಬೇಕು. ಅಲ್ಲದೇ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಹಾಗೂ ವೈದ್ಯರು ಜನಸ್ನೇಹಿಯಾಗಿದ್ದು, ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಎಲ್ಲರೂ ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆಸ್ಪತ್ರೆ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಕ್ರಂ ಸಿದ್ದಾರೆಡ್ಡಿ ಮಾತನಾಡಿ, ಆಸ್ಪತ್ರೆಯ 12ನೇ ವಾರ್ಷಿಕೋತ್ಸವದ ನಿಮಿತ್ತ ಉಚಿತ ಹೃದಯ ತಪಾಸಣೆ ಶಿಬಿರ ಕೈಗೊಂಡಿದ್ದೇವೆ. ಎಲ್ಲ ಪರೀಕ್ಷೆ, ಸ್ಕ್ಯಾನಿಂಗ್ಗಳನ್ನು ಉಚಿತವಾಗಿ ಮಾಡಲಾಗಿದೆ. ಅಗತ್ಯ ಇದ್ದವರಿಗೆ ಔಷಧ ವಿತರಿಸಲಾಗಿದೆ. ಕೋರೋನರಿ ಆಂಜಿಯೋಗ್ರಾಂ ಪ್ರಕ್ರಿಯೆಗೆ ಒಳಗಾಗಲು ಸೂಚಿಸಿದ ಎಲ್ಲ 30 ಜನರಿಗೆ ಆ ಪ್ರಕ್ರಿಯೆಯನ್ನು ಮುಂದಿನ ಒಂದೆರಡು ದಿನಗಳಲ್ಲಿ ಉಚಿತವಾಗಿ ಮಾಡಿ ಮುಗಿಸಲಾಗುವುದು ಎಂದರು.
ಶಿಬಿರದಲ್ಲಿ ಸುಮಾರು 870 ಜನರನ್ನು ಪರೀಕ್ಷಿಸಿ, ರಕ್ತಪರೀಕ್ಷೆ ಮತ್ತು ಇಸಿಜಿ ಮಾಡಲಾಯಿತು. ಅವರಲ್ಲಿ 90 ಮಂದಿಗೆ ಇಕೋ ಸ್ಕ್ಯಾನಿಂಗ್ ಮಾಡಲಾಗಿದೆ. 30 ಮಂದಿಗೆ ಕೊರೋನರಿ ಆಂಜಿಯೋಗ್ರಾಂ ಪ್ರಕ್ರಿಯೆಗೆ ಒಳಗಾಗಲು ತಿಳಿಸಲಾಗಿದೆ. 550ಕ್ಕೂ ಹೆಚ್ಚು ರೋಗಿಗಳು ಕ್ರಾಸ್ ಕನ್ಸಲ್ಟೇಶನ್ ಮಾಡಿಸಿಕೊಂಡರು.
ಆಸ್ಪತ್ರೆ ನಿರ್ದೇಶಕಿ ಡಾ.ವೀಣಾ ಸಿದ್ದಾರೆಡ್ಡಿ, ಹಿರಿಯ ಹೃದಯ ತಜ್ಞ ಡಾ.ಬಸವಪ್ರಭು ಅಮರಖೇಡ ಮತ್ತು ಡಾ.ಅರುಣ್ ಕುಮಾರ್ ಹರಿದಾಸ, ಮೂಳೆ ತಜ್ಞರಾದ ಡಾ. ರಾಜು ಕುಲಕರ್ಣಿ ಮತ್ತು ಡಾ. ನಿಶಾಂತ್ ಜಾಜಿ, ಇಂಟೆನ್ಸಿವಿಸ್ಟ್ ಡಾ.ಸುದರ್ಶನ ಲಾಖೆ ಮತ್ತು ಡಾ. ಶೇಖ್ ಅಹ್ಮದ್, ಜನರಲ್ ಸರ್ಜನ್ ಡಾ.ಮೊಹ್ಮದ್ ಅಬ್ದುಲ್ ಬಶೀರ್, ನರರೋಗ ತಜ್ಞರಾದ ಡಾ.ವಿನಯ ಸಾಗರ ಶರ್ಮ, ಪ್ಲಾಸ್ಟಿಕ್ ಸರ್ಜನ್ಗಳಾದ ಡಾ. ಪವನ ಪಾಟೀಲ ಮತ್ತು ಡಾ.ಅನಿಲ್ ಕುಮಾರ್ ಮಲ್ಹಾರಿ, ಮಕ್ಕಳ ತಜ್ಞ ಡಾ.ಪ್ರಶಾಂತ್ ಕುಲ್ಕರ್ಣಿ, ಸ್ತ್ರೀರೋಗ ತಜ್ಞೆ ಡಾ.ಶ್ವೇತಾ ಆಳಂದ, ಫಿಜಿಶಿಯನ್ ಡಾ. ದಯಾನಂದ ರೆಡ್ಡಿ ಮತ್ತು ಡಾ. ಶಿವರಾಜ್ ಹಂಚಿನಾಳ, ರೇಡಿಯಾಲಜಿಸ್ಟ್ ಡಾ.ರಾಮಾಚಾರಿ, ಫಿಜಿಯೋಥೆರೆಪಿಸ್ಟ್ ಡಾ.ಅಬ್ದುಲ್ ಹಕೀಮ್, ಸೀನಿಯರ್ ಅಡ್ಮಿನ್ ದಾವುದ್ ಅಲಿ ಮತ್ತು ಡಾ.ಜಿತೇಂದ್ರ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಗೀತಾ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರಾಚಣ್ಣ, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.