ಕಲಬುರಗಿ: ನಗರದ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಉಚ್ಛಾಯಿ (ಮಿನಿ ರಥೋತ್ಸವ) ಸಂದರ್ಭದಲ್ಲಿ ರಥದ ಚಕ್ರಕ್ಕೆ ಸಿಲುಕಿ ಭದ್ರತಾ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಸಾವಿಗೀಡಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಬೀದರ್ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದ ರಾಮ ಸಿದ್ದಪ್ಪ (31) ಮೃತಪಟ್ಟ ಸಿಬ್ಬಂದಿ. ಬೀದರ್ ಜಿಲ್ಲೆಯ ಮತ್ತೊಬ್ಬ ಸಿಬ್ಬಂದಿ ಅಶೋಕ ರೆಡ್ಡಿ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರದಿಂದ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಸಂಜೆ 6.30ರ ಸುಮಾರಿಗೆ ಸಂಪ್ರದಾಯದಂತೆ ಉಚ್ಛಾಯಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಥದ ಬಳಿ ಸಾಗುತ್ತಿದ್ದ ಭಕ್ತರನ್ನು ನಿಯಂತ್ರಿಸಲು ಮುಂದಾದ ರಾಮ ಅವರು ರಥದಡಿ ಸಿಲುಕಿದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟರು.
‘ಘಟನೆಯಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ‘ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ಅವರು ಮಾಹಿತಿ ನೀಡಿದರು.