ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಸಂಚಾಲಕಿ ಸುಜಾತಾ, ‘ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಪ್ರಬಂಧವನ್ನು ಸಲ್ಲಿಸಿಲ್ಲ ಎನ್ನುವುದು ನಿಜವಾದರೂ ಅದನ್ನು ಸಲ್ಲಿಸಲು ದಿನಾಂಕದ ವಿಸ್ತರಣೆಯನ್ನು ಅವರ ಮಾರ್ಗದರ್ಶಕರಿಂದ ಕೇಳಿ ಪಡೆದಿರುತ್ತಾರೆ. ಹಾಗೆಯೇ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಯುಜಿಸಿ ನಿಯಮಾವಳಿಯ ಪ್ರಕಾರ 2 ಬಾರಿ ಸಮಯ ವಿಸ್ತರಣೆಗೆ ಅವಕಾಶ ನೀಡಬೇಕಿತ್ತು. ಜೊತೆಗೆ ಯಾವುದೇ ವಿದ್ಯಾರ್ಥಿಯ ಪ್ರವೇಶವನ್ನು ರದ್ದುಪಡಿಸುವ ಮುಂಚೆ ದಿನಾಂಕ ಮುಗಿಯುವುದರ ಬಗ್ಗೆ ಪೂರ್ವ ಸೂಚನೆ ನೀಡಬಹುದಾಗಿತ್ತು. ಇವೆಲ್ಲ ಅಂಶಗಳನ್ನು ಬದಿಗಿಟ್ಟು ದಲಿತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ಇಡುವ ಪ್ರಯತ್ನವನ್ನು ವಿ.ವಿ. ಆಡಳಿತ ಮಂಡಳಿ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.