ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ | ಸರ್ಕಾರಿ ಶಾಲೆಗಳ ಆರಂಭ ನಾಳೆಯಿಂದ

ಸೇಡಂ; ಸಿಹಿ ಹಂಚಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಕರ ಕಾತರ
Published 30 ಮೇ 2024, 15:41 IST
Last Updated 30 ಮೇ 2024, 15:41 IST
ಅಕ್ಷರ ಗಾತ್ರ

ಸೇಡಂ: ವಿದ್ಯಾರ್ಥಿಗಳ ಬೇಸಿಗೆ ರಜೆ ಮುಗಿದಿದ್ದು ಮೇ 31ರಂದು ಸಿಹಿ ಸಂಭ್ರಮದೊಂದಿಗೆ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಳ್ಳಲಿವೆ.

ಶಿಕ್ಷಕರು ಶಾಲೆಯನ್ನು ತಳಿರು ತೋರಣದಿಂದ ಸಿಂಗರಿಸಿ ಅಲಂಕರಿಸಿದ್ದಾರೆ. ಹೂವಿನ ಅಲಂಕಾರ ಹಾಗೂ ಪುಷ್ಪವೃಷ್ಟಿಗೈದು ಸಿಹಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ 215 ಮತ್ತು 31 ಸರ್ಕಾರಿ ಪ್ರೌಢಶಾಲೆಗಳಿದ್ದು, ಎಲ್ಲಾ ಶಾಲೆಗಳು ಮೇ 31ರಂದು ಆರಂಭಗೊಳ್ಳಲಿವೆ. ತಾಲ್ಲೂಕಿನ ಶಾಲೆಯ ಶಿಕ್ಷಕರ ಆಸಕ್ತಿಯ ಮೇರೆಗೆ ವಿವಿಧ ಹಾಗೂ ವಿಭಿನ್ನವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ. ‘ತಾಲ್ಲೂಕಿನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಸುಮಾರು 34 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಶಾಲೆಗೆ ಪುನರಾಗಮಿಸಲಿದ್ದಾರೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ತಿಳಿಸಿದರು.

ಶಾಲಾ ಆರಂಭಕ್ಕೆ ಬೇಕಾದ ಮುಖ್ಯಶಿಕ್ಷಕರ ಸಭೆ, ವಲಯ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸೇರಿದಂತೆ ಶಿಕ್ಷಣ ಸಂಯೋಜಕರ ಪೂರ್ವ ಭಾವಿ ಸಭೆಯನ್ನು ಜರುಗಿದ್ದು, ಶೈಕ್ಷಣಿಕ ವರ್ಷ ಆರಂಭಕ್ಕೆ ಬೇಕಾದ ಸೂಚನೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಸುಮಾರು ಶೇ 75ರಷ್ಟು ಪಠ್ಯ ಪುಸ್ತಕ ಬಂದಿದ್ದು. ಪುಸ್ತಕ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳ ಸಮವಸ್ತ್ರ ಶಾಲೆಯ ಶಿಕ್ಷಕರು ವಿತರಿಸಲಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸೇಡಂ ತಾಲ್ಲೂಕಿನಲ್ಲಿ 244 ಶಾಲೆಗಳು 34 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ

ತಾಲ್ಲೂಕಿನಲ್ಲಿರುವ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಇಂದಿನಿಂದ ಶಾಲೆಗಳು ಆರಂಭಗೊಳ್ಳಲಿದ್ದು ಸಂತಸದಿಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಲಿದ್ದಾರೆ.

-ಮಾರುತಿ ಹುಜರಾತಿ ಕ್ಷೇತ್ರಶಿಕ್ಷಣಾಧಿಕಾರಿ

ಕ್ಷೇತ್ರಶಿಕ್ಷಣಾಧಿಕಾರಿಗಳ ಸೂಚನೆಯಂತೆ ಶಾಲಾ ಆರಂಭಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲಾ ಆರಂಭ ಕುರಿತು ಪಾಲಕರಿಗೆ ಮಾಹಿತಿ ನೀಡಲಾಗಿದೆ.

-ಬಸವರಾಜ ಬೀರನಳ್ಳಿ, ಮುಖ್ಯಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಜೋಳ

25 ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಯು.ಕೆ.ಜಿ ಆರಂಭ ತಾಲ್ಲೂಕಿನಲ್ಲಿನ 25 ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ. 2024-25ನೇ ಸಾಲಿನಲ್ಲಿ ಪ್ರವೇಶಗಳು ಪ್ರಾರಂಭಗೊಂಡಿವೆ. ಅಲ್ಲದೆ 1ನೇ ತರಗತಿಯಿಂದ 5ನೇ ತರಗತಿ ಆಂಗ್ಲಮಾಧ್ಯಮ ಕಲಿಕೆಗೆ 17 ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿದ್ದು ಪ್ರವೇಶಗಳು ಪ್ರಾರಂಭಗೊಂಡಿವೆ. ಅಲ್ಲದೇ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕೌಶಾಲ್ಯಾಧಿರಿತ ವಿದ್ಯಾರ್ಹತಾ ಚೌಕಟ್ಟಿನಡಿ 15 ಪ್ರೌಢಶಾಲೆಗಳಲ್ಲಿ ಆಯ್ಕೆಗೆ ಅವಕಾಶವಿದ್ದು ವಿದ್ಯಾರ್ಥಿಗಳು ಎನ್.ಎಸ್.ಕ್ಯೂ.ಎಪ್ ಅಡಿ ತೃತೀಯ ಭಾಷೆ ಹಿಂದಿ ಬದಲಾಗಿ ಐಚ್ಛಿಕ ವಿಷಯ ಆಯ್ಕೆ ಮಾಡಲು ಅವಕಾಶವಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT