ಚಿಂಚೋಳಿ: ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎನ್ಎಂಎಂಎಸ್ ಬಳಕೆ ಮಾಡಲಾಗುತ್ತಿದ್ದು ಬೋಗಸ್ ಹಾಜರಾತಿಗೆ ಕಡಿವಾಣ ಹಾಕಲಾಗುತ್ತಿದೆ.
ಈ ಆ್ಯಪ್ ಹಿಂದಿನ ವರ್ಷಗಳಿಂದಲೇ ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲ. ಆದರೆ ಪ್ರಸಕ್ತ ವರ್ಷ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಾ.ಪಂ. ಇಒ ಶಂಕರ ರಾಠೋಡ್ ಪ್ರಜಾವಾಣಿಗೆ ತಿಳಿಸಿದರು.
ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳಲ್ಲಿ 2024-25ನೇ ಸಾಲಿನಲ್ಲಿ 9.91ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನಿಗದಿಯಾಗಿದ್ದು ತಾಲ್ಲೂಕಿನಲ್ಲಿ 93ಸಾವಿರ ಕಾರ್ಮಿಕರ ಪೈಕಿ 42 ಸಾವಿರ ಕ್ರಿಯಾತ್ಮಕ ಕಾರ್ಮಿಕರಿದ್ದಾರೆ ಎಂದು ಯೋಜನೆಯ ಸಹಾಯಕ ನಿರ್ದೆಶಕ ಶಿವಶಂಕ್ರಯ್ಯ ಸ್ಥಾವರಮಠ ತಿಳಿಸಿದರು.
ತಾಲ್ಲೂಕಿನ ಬಹುತೇಕ ಎಲ್ಲಾ ಪಂಚಾಯಿತಿಗಳಲ್ಲಿ ನದಿ, ನಾಲಾ, ತೊರೆಗಳು, ಬಾವಿ, ಕೆರೆ, ಕುಂಟೆಗಳ ಹೂಳೆತ್ತುವಂತಹ ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಹೊಸದಾಗಿ ಉದ್ಯೋಗ ಚೀಟಿ ವಿತರಣೆ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಡೆ ಹಿಡಿಯಲಾಗಿದೆ.
ತಾಲ್ಲೂಕಿನಿಂದ ಸಾವಿರಾರು ಮಂದಿ ಉದ್ಯೋಗ ಅರಸಿ ಮುಂಬಯಿ ಪುಣೆ ಹಾಗೂ ಬೆಂಗಳೂರುಗಳಿಗೆ ವರ್ಷದಲ್ಲಿ 6 ತಿಂಗಳು ಗುಳೆ ಹೋಗುವುದು ಮಾಮೂಲಾಗಿದೆ. ಯೋಜನೆಯಲ್ಲಿ ನಡೆಯುತ್ತಿರುವ ಬೋಗಸ್ ಹಾಜರಾತಿಗೆ ಕಡಿವಾಣ ಬಿದ್ದರೆ ಗುಳೆ ಕಾರ್ಮಿಕರು ಇಲ್ಲಿಯೇ ಕೆಲಸ ಮಾಡುತ್ತಾರೆ. ಅಧಿಕಾರಿಗಳ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸ್ಸಪ್ಪ ಮಮಶೆಟ್ಟಿ ತಿಳಿಸಿದರು.
ಕಾಮಗಾರಿ ಪರಿಶೀಲನೆ: ಈಚೆಗೆ ತಾಲ್ಲೂಕಿನ ಕುಂಚಾವರಂ ಬಳಿಯ ಲಿಂಗಾ ನಗರ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ 350ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಜಿ.ಪಂ. ಸಿಇಒ ಭಂವರಸಿಂಗ್ ಮೀನಾ ಪರಿಶೀಲಿಸಿದರು.
ನರೇಗಾದಿಂದ ನಮಗೆ ತುಂಬಾ ಅನುಕೂಲವಾಗಿದೆ. ನಮ್ಮ ಊರಿನಲ್ಲಿ 150 ಕಾರ್ಮಿಕರನ್ನು ಸಂಘಟಿಸಿ ಕೆಲಸಕ್ಕೆ ಹಚ್ಚಿದ್ದೇನೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆಶಾಮರಾವ್ ತಾಜಲಾಪುರ ಕಾಯಕ ಬಂಧು ಕನಕಪುರ ಗ್ರಾ.ಪಂ
ತಾಲ್ಲೂಕಿನಲ್ಲಿ ಈವರೆಗೆ 27 ಸಾವಿರ ಮಾನವ ದಿನಗಳ ಸೃಜನೆ ಮಾಡಲಾಗಿದೆ. ಜೂನ್ ಆರಂಭಕ್ಕಿಂತ ಮೊದಲು 2 ಲಕ್ಷ ತಲುಪುವ ಗುರಿ ಹಾಕಿಕೊಂಡಿದ್ದೇವೆ. ಮೇ ತಿಂಗಳಿನಿಂದ ಕಾರ್ಮಿಕರ ಸಂಖ್ಯೆ ದುಪ್ಪಟ್ಟಾಗಲಿದೆಶಂಕರ ರಾಠೋಡ್ ಇಒ ತಾಪಂ. ಚಿಂಚೋಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.