ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗುಂಜೋಟಿಯಲ್ಲಿರುವುದು ರಾಘವ ಚೈತನ್ಯರ ಸಮಾಧಿಯಲ್ಲ’

Published 14 ಮಾರ್ಚ್ 2024, 15:06 IST
Last Updated 14 ಮಾರ್ಚ್ 2024, 15:06 IST
ಅಕ್ಷರ ಗಾತ್ರ

ಕಲಬುರಗಿ: ‘ಉಮರ್ಗಾ ತಾಲ್ಲೂಕಿನ ಗುಂಜೋಟಿಯಲ್ಲಿರುವುದು ಚೈತನ್ಯ ಪ್ರಭು ಮಹಾರಾಜರ ಸಮಾಧಿಯಾಗಿದೆ. ಜನಸಾಮಾನ್ಯರು ಅವರನ್ನು ಸಾತಲಿಂಗಪ್ಪ ಮಹಾರಾಜ ಎಂದು ಕರೆಯುತ್ತಾರೆ. ಅಲ್ಲಿರುವುದು ಅದು ರಾಘವ ಚೈತನ್ಯರ ಸಮಾಧಿಯಲ್ಲ; ಆಳಂದ ದರ್ಗಾದ ಆವರಣದಲ್ಲಿರುವ ಸಮಾಧಿಯೇ ರಾಘವ ಚೈತನ್ಯರ ಸಮಾಧಿಯಾಗಿದೆ ಎನ್ನುವುದು ಆಳಂದ ಹಿಂದೂಗಳ ನಂಬಿಕೆ’ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಮಾಧಿ ವಿಷಯದ ಕುರಿತು ವ್ಯಾಜ್ಯ ಈಗಾಗಲೇ ನ್ಯಾಯಾಲಯದ ಅಂಗಳದಲ್ಲಿದೆ. ಅಲ್ಲದೆ ನ್ಯಾಯಾಲಯಕ್ಕೆ ಬೇಕಾದ ದಾಖಲೆಗಳನ್ನು, ಸಾಕ್ಷಿಗಳನ್ನು ಸಲ್ಲಿಸಲಾಗಿದೆ. ಶಾಸಕ ಬಿ.ಆರ್. ಪಾಟೀಲ ಒಂದು ಧರ್ಮವನ್ನು ಸಂತುಷ್ಟಗೊಳಿಸುವುದಕ್ಕಾಗಿ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಶಿವರಾತ್ರಿಯ ದಿನ ಗುಂಜೋಟಿಗೆ ಹೋಗಿ ಅಲ್ಲಿರುವ ಸಾತಲಿಂಗಪ್ಪ ಮಹಾರಾಜರ ಸಮಾಧಿಯನ್ನು ರಾಘವ ಚೈತನ್ಯರ ಸಮಾಧಿ ಎಂದು ಸುಳ್ಳು ಹೇಳಿ ಹಿಂದೂಗಳ ಮಧ್ಯದಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಬಿ.ಆರ್ ಪಾಟೀಲ ಅವರು ಗುಂಜೋಟಿಯಲ್ಲಿ ವಾಸವಾಗಿರುವ ಎಡಪಂಥೀಯ ವಿಚಾರಧಾರೆಯ ಅರುಣ ರೇಣುಕೆ ಅವರನ್ನು ಕರೆದುಕೊಂಡು ಮುಕುಂದ ದೇಶಪಾಂಡೆಯವರ ಮನೆಗೆ ಹೋಗಿ ಇದು ರಾಘವ ಚೈತನ್ಯರ ಸಮಾಧಿ ಎಂದು ಸುಳ್ಳು ಹೇಳಿದ್ದಾರೆ. ವಾಸ್ತವದಲ್ಲಿ ಅರುಣ ರೇಣುಕೆಯವರ ಪತ್ನಿ ಗುಂಜೋಟಿಯಲ್ಲಿರುವ ಕೃಷ್ಣ ವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಾವು ಕೂಡ ಗುಂಜೋಟಿಗೆ ಭೇಟಿ ನೀಡಿ ದೇಶಪಾಂಡೆ ಕುಟುಂಬದವರ ಹಾಗೂ ಗ್ರಾಮಸ್ಥರ ಜೊತೆಗೆ ಮಾತನಾಡಿದ್ದೇವೆ. ಅವರು ನೀಡಿರುವ ಮಾಹಿತಿಯನ್ನು ಶಾಸಕ ಬಿ. ಆರ್. ಪಾಟೀಲ ಮುಚ್ಚಿಟ್ಟು ಅದಕ್ಕೆ ತದ್ವಿರುದ್ಧವಾದ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT