ಕಲಬುರಗಿ: ‘ರಮಾಬಾಯಿ ಅಂಬೇಡ್ಕರ್ ಅವರು ಬಾಲ್ಯದಿಂದ ಕಷ್ಟಗಳನ್ನು ಎದುರಿಸಿ ಪತಿಗೆ ಪ್ರೋತ್ಸಾಹ ನೀಡಿದ ಮಹಾತ್ಯಾಗಿ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಜಯದೇವಿ ಗಾಯಕವಾಡ ಹೇಳಿದರು.
ನಗರದ ಕೆಪಿಇ ಸಂಸ್ಥೆ ಸಂಚಾಲಿತ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಡಾ. ಅಂಬೇಡ್ಕರ್ ವಿಚಾರ ವೇದಿಕೆ, ಐಕ್ಯೂಎಸಿ ಘಟಕ, ಎನ್ಎಸ್ಎಸ್ ಘಟಕಗಳ ಸಹಯೋಗದಲ್ಲಿ ನಡೆದ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾರಾಷ್ಟ್ರದ ಧಾಭೋಳ ಬಳಿಯ ವಣಂದಗಾಂವದ ಮಂಕು ಧೋತ್ರೆ ಮತ್ತು ರುಕ್ಮಿಣಿ ಬಾಯಿ ಅವರ ಉದರದಲ್ಲಿ ರಮಾಬಾಯಿ ಅವರು ಜನಿಸಿದರು. ರಮಾಬಾಯಿ ಸಾಮಾನ್ಯರಾಗಿರಲಿಲ್ಲ. ಪತಿಯ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು ಎಂದು ಹೇಳಿದರು.
ಜಗತ್ತನ್ನೇ ಸೆಳೆದ ಅಂಬೇಡ್ಕರ್ ಅವರ ಪತ್ನಿಯಾಗಿ ರಮಾಬಾಯಿ ಕೋಟ್ಯಂತರ ಜನರ ತಾಯಿಯಾಗಿದ್ದರು. 1925ರಲ್ಲಿ ರಮಾಬಾಯಿ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾವೇ ನಿರ್ಮಿಸಿದ್ದ ಧಾರವಾಡದ ವಸತಿ ನಿಲಯಕ್ಕೆ ಕರೆತಂದು ಆರೈಕೆ ಮಾಡಲು ಬಿಡುತ್ತಾರೆ ಎಂದರು.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ಒಂದು ದಿನದ ಊಟ ಕೊಡಲು ಸಾಧ್ಯವಾಗುವುದಿಲ್ಲ. ಈ ವೇಳೆ ರಮಾತಾಯಿ ತಮ್ಮ ಕೈಯಲ್ಲಿರುವ ಬಳೆಗಳನ್ನು ಮಾರಾಟ ಮಾಡಿ ಮಕ್ಕಳಿಗೆ ಊಟ ಬಡಿಸಿದ್ದರು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ವಿಜಯಕುಮಾರ್ ಡಿ., ಅಂಬೇಡ್ಕರ್ ವಿಚಾರ ವೇದಿಕೆಯ ಸಂಯೋಜಕ ಗಾಂಧೀಜಿ ಮೊಳಕೆರೆ ಮಾತನಾಡಿದರು.
ಐಕ್ಯೂಎಸಿ ಸಂಯೋಜಕಿ ನಿರ್ಮಲಾ ಸಿರಗಾಪುರ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಸಿದ್ದಪ್ಪ ಎಂ.ಕಾಂತ ಅವರು ವಂದಿಸಿದರು. ಪಂಡಿತ್ ಬಿ.ಕೆ. ನಿರೂಪಿಸಿದರು.