ಚಿಂಚೋಳಿ: ಪೋಷಕರು ತಮ್ಮ ಮಕ್ಕಳಿಗೆ ದುಡಿಯುವ ಗುಣ ಕಲಿಸಬೇಕು. ಶಾಲೆಗಳ ರಜಾ ಅವಧಿಯಲ್ಲಿ ಅವರನ್ನು ಹೊಲಗಳಿಗೆ ಕರೆದುಕೊಂಡು ಹೋಗಬೇಕು ಎಂದು ತಡೋಳಾ ಹಿರೇಮಠದ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ದೇಗಲಮಡಿಯ ಬಸವಲಿಂಗ ಅವಧೂತರ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆ ವೇಳೆ ಬಿಸಿಲಿನ ತಾಪಮಾನ 45 ಡಿಗ್ರಿ ದಾಟುತ್ತದೆ. ವಾತಾರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಆಗುತ್ತದೆ. ಇದರಿಂದ ಅನಾರೋಗ್ಯ ಹೆಚ್ಚುತ್ತದೆ. ಇದನ್ನು ತಡೆಯಲು ಪ್ರತಿಯೊಬ್ಬರು ಒಂದೊಂದು ಸಸಿ ನೆಡಬೇಕು ಎಂದರು.
ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವಣ್ಣನವರ ದಾಸೋಹ ತತ್ವ, ಶರಣರ ಸಮ ಸಮಾಜದ ಕಲ್ಪನೆ ಎಂದಿಗೂ ಪ್ರಸ್ತುತ. ಎಲ್ಲರೂ ವಚನ ಸಾಹಿತ್ಯ ಓದಿ, ಅವುಗಳ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಡಿವೈಎಸ್ಪಿ ಬಸವೇಶ್ವರ ಹೀರಾ, ಗ್ರಾ.ಪಂ. ಅಧ್ಯಕ್ಷೆ ಶೋಭಾ ಸಂಗಪ್ಪ ಮುದ್ದಾ, ವಕೀಲ ಲಕ್ಷ್ಮಣ ಆವುಂಟಿ, ಶ್ರೀಮಂತ ಕಟ್ಟಿಮನಿ, ಜೆಸ್ಕಾಂ ಮಾಜಿ ನಿರ್ದೆಶಕಿ ಉಮಾ ಪಾಟೀಲ, ನವಲಿಂಗ ಪಾಟೀಲ, ದೇವೇಂದ್ರ ಕರಂಜೆ ಇದ್ದರು.
ಧರ್ಮಸಭೆಗೂ ಮುನ್ನಾ ಅಕ್ಕಮಹಾದೇವಿಯ ತೊಟ್ಟಿಲುತ್ಸವ ಜರುಗಿತು. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ, ತಾ.ಪಂ. ಇಒ ಅನಿಲಕುಮಾರ ರಾಠೋಡ್, ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಸಬ್ ಇನಸ್ಪೆಕ್ಟರ್ ಮಂಜುನಾಥರೆಡ್ಡಿ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆದರು.