ಕಲಬುರ್ಗಿ: ಪತ್ನಿ ವಿಚ್ಚೇದನ ನೀಡಲು ಪತ್ನಿ ಸತಾಯಿಸುತ್ತಿದ್ದಾಳೆ ಎಂದು ಆರೋಪಿಸಿ ಆಳಂದ ತಾಲ್ಲೂಕಿನ ನಿಬರ್ಗಾ ನಿವಾಸಿ ಶರಣಬಸಪ್ಪ ಲಾಡಪ್ಪ ಮಾನೆ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಪತ್ನಿಯ ವಿರುದ್ಧ ಆರೋಪಗಳ ಮಳೆಗರೆಯುತ್ತಲೇ ಇಲಿ ಸಾಯಿಸಲು ಬಳಸುವ ವಿಷದ ಬಾಟಲಿಯನ್ನು ಜೇಬಿನಿಂದ ತೆಗೆದು ಕುಡಿದರು. ಇದರಿಂದ ಪತ್ರಕರ್ತರು ಗಲಿಬಿಲಿಗೊಂಡರು. ವಿಷದ ಬಾಟಲಿಯ ಕವರ್ನ್ನು ಪತ್ರಕರ್ತರ ಮುಂದೆ ಪ್ರದರ್ಶಿಸಿ ‘ವಿಷ ಕುಡಿದಿದ್ದೇನೆ’ ಎಂದು ಕೂಗಿಕೊಂಡರು. ಈ ವಿಷಯ ಹರಡುತ್ತಿದ್ದಂತೆ ಸುದ್ದಿವಾಹಿನಿಗಳ ಛಾಯಾಗ್ರಾಹಕರು ಅವರನ್ನು ಮುತ್ತಿಕೊಂಡರು.
ಪತ್ರಿಕಾಗೋಷ್ಠಿಯ ಸಭಾಂಗಣದಲ್ಲಿ ಇದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೂಡಲೇ 108 ಆಂಬುಲೆನ್ಸ್ಗೆ ಕರೆ ಮಾಡಿದರು. ಆಂಬುಲೆನ್ಸ್ ಬಂದರೂ ಶರಣಬಸಪ್ಪ ಸಭಾಂಗಣದಿಂದ ಹೊರಬರಲಿಲ್ಲ. ಕೆಲವು ಪತ್ರಕರ್ತರು ಬಲವಂತವಾಗಿ ಎತ್ತಿಕೊಂಡು ಆಂಬುಲೆನ್ಸ್ಗೆ ಹತ್ತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದು: ‘17 ವರ್ಷದ ಹಿಂದೆ ನನ್ನ ಮದುವೆಯಾಗಿದ್ದು, ಮೂರು ಮಕ್ಕಳಿ ದ್ದಾರೆ. ಆದರೆ, ಪತ್ನಿ ಕುಟುಂಬ ತೊರೆದು ಬೇರೆ ವಾಸವಾಗಿದ್ದಾಳೆ. ವಿಚ್ಚೇದನಕ್ಕೂ ಸಮ್ಮತಿ ನೀಡುತ್ತಿಲ್ಲ’ ಎಂದು ಶರಣಬಸಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಹಿರಿಯರು ಸಂಧಾನ ಮಾಡಿಸಿದರೂ ಪತ್ನಿ ಮನೆಗೆ ಬರಲು ಒಪ್ಪುತ್ತಿಲ್ಲ. ಆಕೆಗೆ ಅನೈತಿಕ ಸಂಬಂಧವಿದೆ. ಮದುವೆ ಮಾಡಿಸಿದ ಹಿರಿಯರ ಸಮ್ಮುಖದಲ್ಲಿ ವಿಚ್ಚೇದನ ಪತ್ರಕ್ಕೆ ಸಹಿ ಮಾಡಿದ್ದಾಳೆ. ಆದರೆ, ಪತ್ರವನ್ನು ಕೋರ್ಟ್ ಈವರೆಗೂ ಮಾನ್ಯ ಮಾಡಿಲ್ಲ. ಪತ್ನಿ ಕೋರ್ಟ್ ಮುಂದೆ ವಿಚ್ಚೇದನಕ್ಕೆ ನಿರಾಕರಿಸುತ್ತಿದ್ದಾಳೆ. ಬಹಳ ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ’ ಎಂದು ತಿಳಿಸಿದರು.
ಮಾ.23ರಂದು ಆಳಂದದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಿಗದಿಯಾಗಿದೆ.