ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ಪೂರ್ಣಗೊಳ್ಳದ ಕಾಮಗಾರಿ, ಮುಗಿಯದ ಕಸದ ಕಿರಿಕಿರಿ

Published 11 ಫೆಬ್ರುವರಿ 2024, 5:51 IST
Last Updated 11 ಫೆಬ್ರುವರಿ 2024, 5:51 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದಲ್ಲಿ ಇನ್ನೂ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಸದ ಸಮಸ್ಯೆಯಿಂದ ನಾಗರಿಕರಿಗೆ ಮುಕ್ತಿ ದೊರಕಿಲ್ಲ. ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಕಸವಿಲೇವಾರಿ ಸಮಸ್ಯೆ ತಲೆದೋರಿದೆ.

ಪುರಸಭೆ ವತಿಯಿಂದ ಕಸ ವಿಲೇವಾರಿ ಹಾಗೂ ನಿರ್ವಹಣೆಗೆಂದು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ 7.15 ಎಕರೆ ಜಾಗವನ್ನು 2006ರಲ್ಲಿ ಖರೀದಿಸಿ ನಂತರ ನಿತ್ಯ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ಭುವನಗಿರಿಯಲ್ಲಿ ವಿಲೇವಾರಿ ಮಾಡುತ್ತ ಬಂದಿದೆ. ಈ ಜಾಗದಲ್ಲಿ ಕಸ ಬೇರ್ಪಡಿಸುವ ಘಟಕದ ಈಗಾಗಲೇ ಕಾಮಗಾರಿ ಕೂಡ ಆರಂಭಗೊಂಡಿದೆ. ಆದರೆ, ಇನ್ನೂ ಪೂರ್ಣಗೊಂಡಿಲ್ಲ.

ಒಂದು ವೇಳೆ ಈ ಕಾಮಗಾರಿ ಬೇಗ ಪೂರ್ಣಗೊಂಡಲ್ಲಿ ಕಸದ ವೈಜ್ಞಾನಿಕ ವಿಲೇವಾರಿ ಸಾಧ್ಯವಾಗಲಿದೆ. ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ವಿಲೇವಾರಿ ಮಾಡಬಹುದು. ಈ ಬಿದ್ದಿರುವ ಹಳೆಯ ಕಸವನ್ನು ತೆರವುಗೊಳಿಸಿದರೆ ಸುತ್ತಮುತ್ತಲ ವಾತಾವರಣ ಸಹನೀಯವಾಗಲಿದೆ.

‘ಕುಶಾಲನಗರ ಪುರಸಭೆ ವತಿಯಿಂದ ₹ 1.30 ಕೋಟಿ ವೆಚ್ಚದಲ್ಲಿ ನೆಲಭರ್ತಿ ಜಾಗದಲ್ಲಿ ರಸ್ತೆ, ಚರಂಡಿ, ಕಾಂಪೌಂಡ್, ಮಳೆ ನೀರು ಕೊಯ್ಲು, ಸಂಸ್ಕರಣಾ ಘಟಕ, ಶೌಚಾಲಯ, ವೇ ಬ್ರಿಡ್ಜ್ ಮತ್ತು ಇತರೇ ಕಾಮಗಾರಿಗಳನ್ನು ಕೈಗೊಂಡಿದ್ದು, ಎಲ್ಲಾ ಕಾಮಗಾರಿಗಳೂ ಪೂರ್ಣಗೊಂಡಿವೆ. ಇದರೊಂದಿಗೆ ₹ 1.30 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ
ಸ್ಯಾನಿಟರಿ ಲ್ಯಾಂಡ್ ಫಿಲ್, ಘನ ತ್ಯಾಜ್ಯ ಸಂಗ್ರಹ ಕೇಂದ್ರ, ಗ್ರಾವೆಲ್ ಫಿಲ್ಟರ್ ಹಾಗೂ ಇತರೇ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾರಂಪರಿಕ ತ್ಯಾಜ್ಯ ವಿಲೇವಾರಿಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂದಾಜು ಮೊತ್ತ ₹ 3.20 ಕೋಟಿಗೆ ಕಾಯ್ದೆರಿಸಲಾಗಿದೆ ಎಂದು ಹೇಳಿದರು.

ದಿನದಿಂದ ದಿನಕ್ಕೆ ಕಸದಿಂದ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ವಿಲೇವಾರಿ ನಿಲ್ಲಿಸುವಂತೆ ಈ ಹಿಂದೆ
ಭುವನಗಿರಿ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದರು.

ಅಸಮರ್ಪಕ ನಿರ್ವಹಣೆ, ನಾಯಿಗಳ ಹಾವಳಿ: ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಹಾಕುವ ಭುವನಗಿರಿಯ ತ್ಯಾಜ್ಯ ವಿಲೇವಾರಿ ಘಟಕ ಗಬ್ಬೆದ್ದು ದುರ್ವಾಸನೆ ಬೀರುತ್ತಿದೆ. ಕಸವನ್ನು ಹೊತ್ತು ತರುತ್ತಿರುವ ಟ್ರ್ಯಾಕ್ಟರ್‌ಗಳ ತ್ಯಾಜ್ಯದ ವಾಸನೆಯನ್ನು ಬೆನ್ನತ್ತಿ ಅನೇಕ ನಾಯಿಗಳು ಘಟಕದ ಒಳಗೆ ಬರುತ್ತವೆ. ಅನೇಕ ಬಾರಿ ಸುತ್ತಮುತ್ತಲ ನಿವಾಸಿಗಳ ಮೇಲೆ ಈ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆಗಳೂ ನಡೆದಿವೆ. ಸಾಕಿದ ಬೆಕ್ಕುಗಳನ್ನೂ ಕೊಲ್ಲುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.

ವಸತಿ ನಿಲಯಗಳು, ಹೋಟೆಲ್‌ಗಳು ಮತ್ತು ಕಲ್ಯಾಣ ಮಂಟಪಗಳು ಹೊರಸೂಸುವ ಆಹಾರ ತ್ಯಾಜ್ಯಗಳನ್ನು ಇಲ್ಲಿಗೆ ಸುರಿಯಲಾಗುತ್ತಿದೆ. ಅನೇಕ ಬಾರಿ ಸತ್ತ ಪ್ರಾಣಿಗಳನ್ನು ಕಸದ ಜತೆ ತಂದು ಹಾಕುತ್ತಿರುವುದರಿಂದ ಕೆಟ್ಟ ವಾಸನೆ ಹೊಮ್ಮುತ್ತಿದ್ದು, ಇಲ್ಲಿನವರನ್ನು ಕಾಡುತ್ತಿದೆ. ನಾಯಿಗಳು, ಹದ್ದುಗಳು, ಕಾಗೆಗಳು ಹೆಚ್ಚಾಗಿವೆ. ಇದರಿಂದ ದುರ್ನಾತದ ವಾತಾವರಣ ಸೃಷ್ಟಿಯಾಗಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಕುಶಾಲನಗರ ತಾಲ್ಲೂಕಿನ ಭುವನಗಿರಿಯಲ್ಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರ
ಕುಶಾಲನಗರ ತಾಲ್ಲೂಕಿನ ಭುವನಗಿರಿಯಲ್ಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರ
ಕಾಮಗಾರಿಗಳನ್ನು ಬೇಗ ಮುಗಿಸಲು ಒತ್ತಾಯ ಹಸಿ, ಒಣ ಕಸ ಬೇರ್ಪಡಿಸಲು ಆಗ್ರಹ ಕಸದಿಂದ ಉಂಟಾಗುವ ಸಮಸ್ಯೆ ನಿರ್ವಹಣೆಗೆ ಮನವಿ
ಭುವನಗಿರಿಯಲ್ಲಿರುವ ಘಟಕದಿಂದ ಸುತ್ತಲಿನ ಗ್ರಾಮಗಳ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಮರ್ಪಕವಾಗಿ ಕಸವಿಲೇವಾರಿ ಮಾಡುವುದರ ಜೊತೆಗೆ ರೋಗಗಳು ಹರಡದಂತೆ ಔಷಧಿ ಸಿಂಪಡಣೆ ಮಾಡಬೇಕು.
ಜಯಶೀಲ ಕೂಡಿಗೆ.
ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ಸಂಗ್ರಹ ಘಟಕದಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯು ಅಶುಚಿತ್ವದ ವಾತಾವರಣ ನಿರ್ಮಾಣಕ್ಕೆ‌ ಕಾರಣವಾಗಿದೆ. ತ್ಯಾಜ್ಯ ಘಟಕದ ಸಮಸ್ಯೆ ಆದಷ್ಟು ಬೇಗ ಪರಿಹರಿಸಬೇಕು.
ಚಂದ್ರು ಗ್ರಾಮಸ್ಥ.
₹ 1.30 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಸ್ಯಾನಿಟರಿ ಲ್ಯಾಂಡ್ ಫಿಲ್ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರ ಹಾಗೂ ಇತರೇ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕೃಷ್ಣಪ್ರಸಾದ್ ಮುಖ್ಯಾಧಿಕಾರಿ ಪುರಸಭೆ ಕುಶಾಲನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT