ನಾಪೋಕ್ಲು: ಸೃಜನಶೀಲವಾದ ಸಾಹಿತ್ಯದ ಮೂಲಕ ಜನರಲ್ಲಿ ನಾಗರಿಕ ಪ್ರಜ್ಞೆ ಜಾಗೃತವಾಗಬೇಕು ಎಂದು ಮಂಗಳೂರಿನ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅಭಿಪ್ರಾಯ ಪಟ್ಟರು. ಸಮೀಪದ ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ಬುಧವಾರ ನಡೆದ ಕೊಡಗು ಜಿಲ್ಲಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಿಗ್ಗಾಲಿನ ಸಾಹಿತಿ ಗಿರೀಶ್ ಕಿಗ್ಗಾಲು ಅವರು ನಗೆಹೋಳಿಗೆ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯ ರಚನೆಯ ಮೂಲಕ ರಾಷ್ಟ್ರದ ಬಗ್ಗೆ ಅಭಿಮಾನವನ್ನು ಜಾಗೃತಗೊಳಿಸುವ ಪ್ರಯತ್ನ ಆಗಬೇಕಾಗಿದೆ ಜನಸಾಮಾನ್ಯರಲ್ಲಿ ನೈತಿಕ, ನಾಗರಿಕ, ಪರಿಸರ ಪ್ರಜ್ಞೆಗಳನ್ನು ಮೂಡಿಸುವಂತಹ ಕಾರ್ಯ ಇಂದಿನ ತುರ್ತು ಅಗತ್ಯವಾಗಿದೆ. ಹೊರದೇಶ ಗಳಲ್ಲಿ ಅಲ್ಲಿನ ಪ್ರಜೆಗಳು ವಿವಿಧ ಪ್ರಜ್ಞೆಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಜೀವನವನ್ನು ಶಿಸ್ತು ಬದ್ದವಾಗಿ ನಡೆಸುತ್ತಿದ್ದಾರೆ. ಆದರೆ ನಮ್ಮಲ್ಲಿ ಏಕೆ ಈ ಜಾಗೃತ ಮನೋಭಾವನೆ ಇಲ್ಲ? ಎಂದು ಪ್ರಶ್ನಿಸಿದ ಅವರು ಕನ್ನಡವನ್ನು ಉಳಿಸಿಬೆಳೆಸುವ ಕೆಲಸ ತಳಮಟ್ಟ ದಿಂದ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಕವಿತಾ ರೈ ಅವರ ಕೊಡಗಿನ ಶತಮಾನದ ಕಾವ್ಯ ಪುಸ್ತಕವನ್ನು ಬಿಡು ಗಡೆ ಮಾಡಿದ ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಾಂತೇಯಂಡ ರವಿಕುಶಾಲಪ್ಪ ಮಾತನಾಡಿ ಕೊಡಗಿನ ಗಡಿ ಭಾಗಗಳಲ್ಲಿ ಕನ್ನಡವನ್ನು ಬೆಳೆಸುವ ಪ್ರಯತ್ನವಾಗಬೇಕಾಗಿದೆ. ಗ್ರಾಮೀಣ ಮಟ್ಟದಲ್ಲಿಕನ್ನಡವನ್ನು ಜಾಗೃತಗೊಳಿಸುವುದಕ್ಕಾಗಿ ಕೊಡಗು ಜಿಲ್ಲೆಯ ತೊಂಬತ್ತೆಂಟು ಗ್ರಾಮ ಪಂಚಾಯತಿಗಳಿಗೆ ತಲಾ ರೂಪಾಯಿ 2000 ಅನುದಾನ ನೀಡಲು ಆದೇಶಿಸ ಲಾಗಿದೆ ಎಂದರು. ವೇದಿಕೆಯಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಕಳಂಚೇರಿ ಮಠದ ಪೀಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮಿ, ಸಮ್ಮೇಳನಾಧ್ಯಕ್ಷೆ ಡಾ. ಪದ್ಮಾಶೇಖರ್,ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಉಪಸ್ಥಿತರಿದ್ದರು.