ಕೆಜಿಎಫ್: ಆಂಡರ್ಸನ್ಪೇಟೆ ವ್ಯಾಪ್ತಿಯ ಆಂಧ್ರಪ್ರದೇಶ ಗಡಿ ಭಾಗದ ಕೆಂಪಾಪುರ ಬಳಿ ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಆಂಡರ್ಸನ್ಪೇಟೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅವರ ಬಳಿಯಿದ್ದ ₹26.40 ಲಕ್ಷ ಮೌಲ್ಯದ 33.5 ಕೆ.ಜಿಯಷ್ಟು ಒಣ ಗಾಂಜಾ ಮತ್ತು ₹60 ಸಾವಿರ ಮೌಲ್ಯದ ಆಟೊವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶದ ವಿ. ಕೋಟೆ ಅಂಬೇಡ್ಕರ್ ನಗರದ ನಿವಾಸಿ ಎಸ್. ವಾಸೀಂ ಮತ್ತು ವಿ.ಕೋಟೆ ಸಮೀಪದ ಚೌಡೇಪಲ್ಲಿ ಗ್ರಾಮದ ನಿವಾಸಿ ಎ.ಹುಸೇನ್ ಕುಟ್ಟಿ ಬಂಧಿತರು.
ಆರೋಪಿಗಳು ಆಟೊದಲ್ಲಿ ಗಾಂಜಾ ಇಟ್ಟುಕೊಂಡು ಚೆಕ್ಪೋಸ್ಟ್ ಮೂಲಕ ಸಾಗಿಸುತ್ತಿದ್ದರು. ಈ ವೇಳೆ ಆಂಡರ್ಸನ್ ಪೇಟೆ ಸಬ್ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ದಾಳಿ ನಡೆಸಿ, ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.