ಕೋಲಾರ: ತಾಲ್ಲೂಕಿನ ವೇಮಗಲ್ ಸಮೀಪದ ನಾಗನಾಳ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೈಸೂರಿನ ರಾಘವೇಂದ್ರ ನಗರ ಬಡಾವಣೆ ನಿವಾಸಿ ಗೌತಮ್ ಗೌಡ (26) ಮೃತ ಯುವಕ. ಮೈಸೂರಿನ ‘ಮಾಲ್ ಆಫ್ ಮೈಸೂರು’ ವಾಣಿಜ್ಯ ಕಟ್ಟಡದಲ್ಲಿರುವ ಕೆಎಫ್ಸಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು ತಂದೆಯ ಊರಾದ ನಾಗನಾಳ ಗ್ರಾಮಕ್ಕೆ ಹೋಗಿದ್ದಾಗ ಕೆಲ ಹುಡುಗರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾರೆ. ಅದನ್ನು ವಿಡಿಯೊ ಮಾಡಲು ಸಹೋದರಿಗೆ ಹೇಳಿ ನೀರಿಗೆ ಜಿಗಿಯುತ್ತಾರೆ.
ಸರಿಯಾಗಿ ಈಜು ಬಾರದ ಅವರು ನೀರಿನಲ್ಲಿ ಮುಳುಗುವುದು ಅರಿವಿಗೆ ಬಾರದ ಸಹೋದರಿಯು ವಿಡಿಯೊ ಮಾಡುವುದನ್ನು ಮುಂದುವರಿಸಿದ್ದಾರೆ. ಕೊನೆಯ ಕ್ಷಣದಲ್ಲಿ ‘ಅಣ್ಣಾ ಹೊರಗೆ ಬಾ’ ಎಂದು ಸಹೋದರಿ ಕಿರುಚಿದ್ದಾರೆ. ಆದರೆ, ದಡ ಸೇರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ ಗೌತಮ್ ಕೊನೆಯುಸಿರೆಳೆದಿದ್ದಾರೆ.