ಮುಳಬಾಗಿಲು: ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದು, ನಾನಾ ಬಗೆಯ ಬೆಳೆ ಬೆಳೆದು ಲಕ್ಷಾಂತರ ಲಾಭ ಪಡೆದು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ
ಎಚ್.ರಮೇಶ್.
ತಾಲ್ಲೂಕಿನ ಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ನಾಗೇನಹಳ್ಳಿ ಗ್ರಾಮದ ಎಚ್.ರಮೇಶ್ 40 ಎಕರೆ ಭೂಮಿಯಲ್ಲಿ ಈಗಾಗಲೇ ಟೊಮೆಟೊ, ಕೋಸು, ಬೀನ್ಸ್, ಕ್ಯಾಪ್ಸಿಕಂ, ಮೆಣಸಿನಕಾಯಿ ಮುಂತಾದ ಅನೇಕ ಬೆಳೆಗಳನ್ನು ಬೆಳೆದು ಲಕ್ಷಾಂತರ ಲಾಭವನ್ನು ಪಡೆದಿದ್ದಾರೆ.
ಜತೆಗೆ ಈ ಬಾರಿ ನುಗ್ಗೆಕಾಯಿ ಸಸಿ ನಾಟಿ ಮಾಡಿದ್ದು ಸಮೃದ್ಧವಾಗಿ ಫಸಲು ಬಂದಿದ್ದು, ಉತ್ತಮ ಲಾಭ ಪಡೆಯುವ ಭರವಸೆಯಲ್ಲಿದ್ದಾರೆ.
ಕೃಷಿ ಮೇಲಿನ ವ್ಯಾಮೋಹದಿಂದ ರಮೇಶ್ ಅವರು ಶಿಕ್ಷಣವನ್ನು ಪಿಯುಸಿಗೆ ತೊರೆದು ಕೃಷಿಯಲ್ಲಿ ತನ್ನನ್ನು
ಅಳವಡಿಸಕೊಂಡರು.
ರೈತರು ಒಂದೇ ಋತುವಿನಲ್ಲಿ ಹಲವು ಬೆಳೆಗಳನ್ನು ಬೆಳೆದರೆ ಒಂದೆರಡು ಬೆಳೆಗಳಾದರೂ ನಮ್ಮ ಕೈ ಹಿಡಿಯುತ್ತದೆ. ಆಗ ನಷ್ಟವಾದ ಬೆಳೆ ಲಾಭದ ಬೆಳೆ ಸರಿದೂಗಿಸುತ್ತದೆ ಎಂಬುದು ರೈತ ಎಚ್.ರಮೇಶ್ ಅವರ ಮಾತು.
ತನ್ನ ಐದು ಎಕರೆ ಜಮೀನಿನಲ್ಲಿ ಪಿಕೆಎಂ ಹಾಗೂ ಭಾಗ್ಯ ಎಂಬ ತಳಿಯ ಮೂರು ಸಾವಿರ ನುಗ್ಗೆ ಸಸಿಗಳನ್ನು ಸುಮಾರು ಐದು ಲಕ್ಷ ವೆಚ್ಚದಲ್ಲಿ ನಾಟಿ ಮಾಡಿದ್ದು, ಫಸಲು ಚೆನ್ನಾಗಿ ಬಂದಿದೆ. ನುಗ್ಗೆಯಲ್ಲಿ ಸುಮಾರು
₹15 ರಿಂದ ₹20 ಲಕ್ಷ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ನುಗ್ಗೆ ಜತೆಗೆ ಬಾಳೆ ಗಿಡಗಳನ್ನು ನಾಟಿ ಮಾಡಲಾಗಿದೆ. ನುಗ್ಗೆಕಾಯಿಗೆ ತಮಿಳುನಾಡಿನ ಚೆನ್ನೈ ಉತ್ತಮ ಮಾರುಕಟ್ಟೆಯಾಗಿದ್ದು, ಈಗಾಗಲೇ ₹ 2 ಲಕ್ಷ ಬಂದಿದೆ ಎಂದರು.
ಮಾರುಕಟ್ಟೆಯಲ್ಲಿ ಒಂದು ಕೆಜಿ ನುಗ್ಗೇಕಾಯಿ ₹ 35ರಿಂದ ₹ 40ಕ್ಕೆ ಮಾರಾಟವಾಗುತ್ತಿದೆ. ಇದೆ ಬೆಲೆ ಇದ್ದರೂ ಸುಮಾರು ₹ 20 ಲಕ್ಷ ಬರಲಿದೆ. ಆದರೆ, ಕಳೆದ ವರ್ಷ ಇದೇ ಋತುವಿನಲ್ಲಿ ಒಂದು ಕೆಜಿ ₹ 60ರಿಂದ ₹ 70ಕ್ಕೆ ಮಾರಾಟವಾಗಿತ್ತು ಎಂದು ತಿಳಿಸಿದರು.
ನುಗ್ಗೆಯಲ್ಲಿ ಔಷಧೀಯ ಗುಣಗಳಿರು ವುದರಿಂದ ಸಾಮಾನ್ಯ ವಾಗಿ ಎಲ್ಲರೂ ಎಲ್ಲಾ ಋತುವಿನಲ್ಲೂ ಬಳಸುತ್ತಾರೆ. ಹಾಗಾಗಿ ರೈತರು ಕನಿಷ್ಠ ಬದಿಗಳಲ್ಲಿ ನುಗ್ಗೆ ಬೆಳೆಸಿದರೂ ಸಾವಿರಾರು ರೂಪಾಯಿ ಸಂಪಾದಿಸಬಹುದು. ಇದರಿಂದ ರೈತರು ಕನಿಷ್ಠ ಖರ್ಚುಗಳನ್ನಾದರೂ ಸಂಪಾದನೆ ಮಾಡಬಹುದು ಎಂಬುದು ರಮೇಶ್ ಅವರ ಮಾತಾಗಿದೆ.
ರೈತರು ಕೇವಲ ಪ್ರಚಾರದ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ಕಡಿಮೆ ಮಾಡಿ ನುಗ್ಗೆ ಬೆಳೆದರೆ ರೈತರು ನಷ್ಟದಿಂದ ಪಾರಾಗಿ ಲಾಭ ಪಡೆಯಬಹುದುಎಚ್.ರಮೇಶ್,ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.