ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಹೇಮಗುಡ್ಡ ಸಮೀಪದ ಟೋಲ್ ಗೇಟ್ ಬಳಿ ಎಸ್.ಆರ್.ಎಸ್. ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಗುರುವಾರ ಬೆಳಿಗ್ಗೆ ಪಲ್ಟಿಯಾಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.
ಹೈದರಾಬಾದ್ನಿಂದ ಬಂದಿದ್ದ ಬಸ್ ಬೆಳಗಾವಿಗೆ ತೆರಳುತ್ತಿತ್ತು. ಹೇಮಗುಡ್ಡದ ಬಳಿ ವೇಗವಾಗಿ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಬಸ್ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗಾಯಾಳುಗಳನ್ನು ಗಂಗಾವತಿ ಮತ್ತು ಕೊಪ್ಪಳ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಇನ್ನೂ ಕೆಲವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಟೈಯರ್ ಸ್ಫೋಟ: ಕೊಪ್ಪಳದ ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ (ಶರ್ಮಾ ಪೆಟ್ರೋಲ್ ಬಂಕ್ ಎದುರು) ಗುರುವಾರ ಬೆಳಿಗ್ಗೆ ಮತ್ತೊಂದು ಅವಘಡ ಸಂಭವಿಸಿದೆ.
ಪೇಂಟ್ ಸರಕು ಹೊತ್ತು ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ವಾಹನದ ಟೈರ್ ಸ್ಫೋಟಗೊಂಡು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಹಾಗೂ ಕಿನ್ನರ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬುಧವಾರ ಬೆಳಗಿನ ಜಾವವೂ ನಡೆದಿದ್ದ ಅವಘಡದಲ್ಲಿ ಸರಕು ಸಾಗಣೆ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು.