ಯಲಬುರ್ಗಾ: ತಾಲ್ಲೂಕಿನ ಮುಧೋಳ ಗ್ರಾಮದಿಂದ ಗಜೇಂದ್ರಗಡ ರಸ್ತೆ(ಕಗ್ಗಲ್ ರಸ್ತೆ) ಸುಧಾರಣೆ ಕಾಮಗಾರಿ ಹೆಸರಿನಲ್ಲಿ ಭಾರೀ ಅವ್ಯವಹಾರ ನಡೆಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಎಸ್.ಕೆ. ಮ್ಯಾಗೇರಿ ಆಗ್ರಹಿಸಿದ್ದಾರೆ.
ಸದ್ರಿ ರಸ್ತೆ ಹೆಸರಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿ ಕಾಟಾಚಾರಕ್ಕೆ ರಸ್ತೆ ಕಾಮಗಾರಿ ಕೈಗೊಂಡು ಸಾಕಷ್ಟು ಹಣವನ್ನು ಲೂಟಿ ಹೊಡೆದಿದ್ದಾರೆ.
ಈ ರಸ್ತೆಯ ಮುಖಾಂತರ ಯಾವುದೇ ಬಸ್ ಸಂಚಾರ ಇಲ್ಲದಿದ್ದರೂ ಪದೇ ಪದೇ ಅನುದಾನ ಬಿಡುಗಡೆ ಮಾಡಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅವ್ಯವಹಾರ ಕೈಗೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಈ ಬಗ್ಗೆ ವಿಶೇಷ ತನಿಖೆ ಕೈಗೊಳ್ಳಬೇಕಾಗಿದೆ. ಈಚೆಗೆ ಕೈಗೊಂಡಿದ್ದ ಕಾಮಗಾರಿಯಲ್ಲಿ ಕಡಿಗಳನ್ನು ಹಾಕಿ ರೋಲರ್ ಹೊಡೆದು ರಸ್ತೆಯನ್ನು ಗಟ್ಟಿ ಮಾಡುವ ಬದಲಾಗಿ ಕೇವಲ ಗರಸು ಹಾಕಿ ಅತ್ತಿತ್ತ ಮಣ್ಣು ಹಾಕಿ ಲೇವಲ್ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.