ಕೊಪ್ಪ: ಇಲ್ಲಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಕಬ್ಬಿನ ಬಾಕಿ ಹಣ ನೀಡಿಲ್ಲ ಎಂದು ಆರೋಪಿಸಿ ವಿವಿಧ ಗ್ರಾಮಗಳ ರೈತರು ಕಾರ್ಖಾನೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ, ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
‘5ರಿಂದ 6 ತಿಂಗಳಿನಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ದ್ದೇವೆ. ಶಾಸಕರ ಹಿಂಬಾಲಕರಿಗೆ ಮಾತ್ರ ಕಬ್ಬಿನ ಬಾಕಿ ಹಣವನ್ನು ನೀಡಿದ್ದಾರೆ. ಸಾಮಾನ್ಯ ರೈತರು ಕಬ್ಬಿನ ಬಾಕಿಗಾಗಿ ಕಾರ್ಖಾನೆಗೆ ಅಲೆಯು ವಂತಾಗಿದೆ. ಕಾರ್ಖಾನೆ ಆಡಳಿತ ಮಂಡಳಿಯವರು ರೈತರನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ. ಮದುವೆ, ತಿಥಿ, ಆಸ್ಪತ್ರೆ ಖರ್ಚಿಗೆ ಹಣ ಕೊಡುತ್ತಿದ್ದರು. ಈಗ ಅದನ್ನು ನಿಲ್ಲಿಸಿದ್ದಾರೆ. ಕಬ್ಬನ್ನು ಬೆಳೆಯಲು ಬ್ಯಾಂಕ್ಗಳಲ್ಲಿ ಸಾಲ ಮಾಡಿ ಕೊಂಡು ಬಡ್ಡಿ ಕಟ್ಟುವುದರಲ್ಲೇ ಜೀವನ ಮುಗಿಯುತ್ತಿದೆ’ ಎಂದು ಪ್ರತಿಭಟನ ಕಾರರು ಅಳಲು ತೋಡಿಕೊಂಡರು.
‘ಸರ್ಕಾರವು ರೈತರ ಸಾಲಮನ್ನಾ ಮಾಡುವುದು ಬೇಡ. ನ್ಯಾಯಬದ್ಧವಾಗಿ ಸಿಗಬೇಕಾಗದ ಹಣವನ್ನು ಕೊಡಿಸಲಿ. ಜನ ಪ್ರತಿನಿಧಿಗಳು ಕಾರ್ಖಾನೆಯವರ ತಾಳಕ್ಕೆ ಕುಣಿದು ರೈತರಿಗೆ ಮೋಸ ಮಾಡುತ್ತಿದ್ದಾರೆ. ತಕ್ಷಣ ಕಬ್ಬಿನ ಬಾಕಿ ಹಣ ಕೊಡಿಸಲಿ, ಇಲ್ಲವೆ ವಿಷ ಕೊಡಲಿ. ಅದನ್ನು ಕುಡಿದು ಮನೆ ಮಂದಿಯೆಲ್ಲಾ ಒಟ್ಟಿಗೆ ಸ್ಮಶಾನ ಸೇರುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಅರೆ ತಿಮ್ಮೇಗೌಡ, ಶಿವಾರ ಪುಟ್ಟಸ್ವಾಮಿ, ಮಂಚಯ್ಯ, ಗಿರಿಯಮ್ಮ, ಎಂ. ಶಿವಣ್ಣ, ರಾಜಣ್ಣ, ಕೀಲಾರ ಶ್ರೀಧರ, ಆಬಲವಾಡಿ ಶಿವರಾಮು, ರಾಜು, ಕುಮಾರ, ಸುನಿಲ್, ಚೊಟ್ಟನಹಳ್ಳಿ ನಾರಾಯಣ್, ಕೋಣಸಾಲೆ ನಂದೀಶ್, ಗಿರೀಶ್, ಅನಿಲ್ ಕುಮಾರ್ ಇದ್ದರು.