ಹುಣಸೂರು: ‘ಸಾಮಾಜಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಕುಟುಂಬ ಸದಾ ಸಹಕಾರ ನೀಡಲಿದೆ’ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ಕನಕ ಭವನದಲ್ಲಿ ಕುರುಬ ಸಮುದಾಯದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುರುಬ ಸಮುದಾಯದ ಅಭಿವೃದ್ಧಿಗೆ ಶಾಸಕ ಜಿ.ಟಿ. ದೇವೇಗೌಡ ಅವರು ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಹುಣಸೂರು ತಾಲ್ಲೂಕಿನ ಕನಕ ಭವನ ನಿರ್ಮಾಣಕ್ಕೆ ₹ 1 ಕೋಟಿ ಅನುದಾನವನ್ನು ಆಗಿನ ಸರ್ಕಾರದಿಂದ ಮಂಜೂರು ಮಾಡಿಸಿದ್ದರು. ಈಗಲೂ ಈ ಸಮುದಾಯದ ಬಗ್ಗೆ ನಮ್ಮ ಕುಟುಂಬ ಪ್ರೀತಿ–ವಿಶ್ವಾಸ ಇಟ್ಟುಕೊಂಡಿದೆ’ ಎಂದರು.
‘ಕಳೆದ ತಿಂಗಳು ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಮಂಡಿಸಿದ ಬೇಡಿಕೆಯನ್ನು ಈಡೇರಿಸಿದ್ದೇನೆ. ಜಾತಿ–ಮತಗಳ ಲೆಕ್ಕಾಚಾರದಲ್ಲಿ ಎಂದಿಗೂ ರಾಜಕೀಯ ಮಾಡುವ ವ್ಯಕ್ತಿತ್ವ ನಮ್ಮದಲ್ಲ’ ಎಂದು ಹೇಳಿದರು.
ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕುನ್ನೇಗೌಡ, ಮುಖಂಡರಾದ ಸುರೇಂದ್ರ, ಬಸವರಾಜು, ಕಣಗಾಲು ರಾಮೇಗೌಡ, ಕಮಲಮ್ಮ, ವೆಂಕಟರಮಣ, ತಟ್ಟೆಕೆರೆ ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷ ದೇವರಾಜು, ಕೃಷ್ಣ ಇದ್ದರು.
ಕಾರ್ಯಕ್ರಮದಲ್ಲಿ ಮೈಲಂಬೂರಿನ ಗುಡ್ಡರ ಕುಣಿತಕ್ಕೆ ಹೆಜ್ಜೆ ಹಾಕಿದ ಹರೀಶ್ ಗೌಡ ಸಮುದಾಯದ ಮೆಚ್ಚುಗೆಗೆ ಪಾತ್ರವಾದರು.