ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಚನ್ನಳ್ಳಿ ಗ್ರಾಮದ ಜಮೀನು ಸರ್ವೆ ನಂಬರ್ 76ರ ಸರ್ಕಾರಿ ಗುಡ್ಡದ ಜಮೀನು ಹಾಗೂ ಸಿದ್ರಾಂಪುರ ಗ್ರಾಮದ ಜಮೀನು ಸರ್ವೆ ನಂಬರ್ 60ರಲ್ಲಿ (ಸರ್ಕಾರಿ ಗುಡ್ಡದ ಜಮೀನು) ಸಸಿ ನೆಡುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕ ಒತ್ತಾಯಿಸಿದೆ.
ಸಿಂಧನೂರು ಅರಣ್ಯ ಇಲಾಖೆಯ ಅಧಿಕಾರಿ 2000 ಸಸಿ ನೆಡುವ ಕಾಮಗಾರಿಯಡಿ ಅಲ್ಪಸ್ವಲ್ಪ ಗಿಡಗಳನ್ನು ನೆಡೆಸಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿದೆ ಎಂದು ಆರೋಪಿಸಿದೆ.
ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಿರುಪಾದಿ ಗೋಮರ್ಸಿ, ದ್ಯಾವಣ್ಣ ಪಿ, ಶರಣಪ್ಪ ಹಂಚಿನಾಳ, ಚನ್ನಬಸವ ಮನವಿ ಸಲ್ಲಿಸಿದ್ದಾರೆ.