ರಾಯಚೂರು: ಕುಷ್ಠರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಂಡಾಗ ರೋಗವನ್ನು ಗುಣಪಡಿಸಬಹುದಾಗಿದ್ದು, ಜನರು ಭಯಪಡೆದೇ ಚಿಕಿತ್ಸೆಗೆ ಮುಂದಾಗಬೇಕು ಎಂದು ರಾಯಚೂರು ತಹಶೀಲ್ದಾರ ಸುರೇಶ ವರ್ಮಾ ಹೇಳಿದರು.
ನಗರದ ತಹಶೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಷ್ಠರೋಗವನ್ನು ಬರುವದಕ್ಕಿಂತ ಮುಂಚೆಯೇ ಪತ್ತೆ ಹಚ್ಚಿ ಅದನ್ನು ಗುಣಪಡಿಸಬೇಕು. ವಿವಿಧ ಇಲಾಖೆಯಿಂದ ಅಗತ್ಯ ಸಹಕಾರ ನೀಡಿದರೆ ಕುಷ್ಟರೋಗ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಈ ಅಭಿಯಾನ ಶಾಲೆಯಲ್ಲಿ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಯುವದರಿಂದ ಎಲ್ಲರೂ ಮುಚ್ಚು ಮರೆ ಇಲ್ಲದೇ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಲಕ್ಷ ಮಾಡಬಾರದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲಕುಮಾರ ಮಾತನಾಡಿ, ಕುಷ್ಠರೋಗವು ಮೈಕ್ರೊಬ್ಯಾಕ್ಟಿರಿಯಂ ಲೆಪ್ರೆ ಎಂಬ ಸೂಕ್ಷ್ಮಾಣುವಿನಿಂದ ಈ ರೋಗ ಬರುತ್ತದೆ. ಈ ರೋಗದ ಲಕ್ಷಣಗಳು ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕೂದಲು ನವೆ ತುರಿಕೆ ಇಲ್ಲದಿರುವದು, ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ಸ್ಪರ್ಶ ಜ್ಞಾನ ಇಲ್ಲದಿರುವದು, ಮುಖದಲ್ಲಿ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತೆ ಹೊಳೆಯುವುದು ಮತ್ತು ಗಂಟಲುಗಳು ಕಾಣಿಸುವುದು ಇತರೆ ಲಕ್ಷಣಗಳು ಕಾಣಿಸಿಕೊಂಡರೆ ತಪಸಣೆ ಮಾಡಿಸಿಕೊಳ್ಳಬೇಕು. ರೋಗವನ್ನು ಪ್ರಾರಂಭದ ಲಕ್ಷಣಗಳಿದ್ದಾಗ ಕಂಡು ಹಿಡಿದು ಚಿಕಿತ್ಸೆಗೊಳಪಡಿಸಿದರೆ ಅಂಗವಿಕಲತೆ ಆಗುವುದಿಲ್ಲ. ಗುಣಮುಖ ಹೊಂದಿದ ಅಂಗವಿಕಲ ಕುಷ್ಠರೋಗಿಗಳನ್ನು ಆರ್.ಸಿ.ಎಸ್. ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ ಮಾತನಾಡಿ, ಕುಷ್ಠರೋಗದ ಕುರಿತು ಶಾಲೆಯಲ್ಲಿ ಮಕ್ಕಳಿಗೆ ಪ್ರಬಂಧ ಅಥವಾ ಪ್ರಶ್ನೋತ್ತರ ಸ್ಪರ್ಧೆಯಂತಹ ಚಟುವಟಿಕೆಗಳನ್ನು ಏರ್ಪಡಿಸಬೇಕು. ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ಸಾರ್ವಜನಿಕರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಂಗರಾವ್ ಕುಲಕರ್ಣಿ ಐಕೂರ ಸ್ಪರ್ಶ ಕುಷ್ಠರೋಗ ಕಾರ್ಯಕ್ರಮದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಶಿಕ್ಷಣ ಇಲಾಖೆ, ನಗರಸಭೆ, ಜಿಲ್ಲಾ ಕುಷ್ಠರೋಗ ಕಚೇರಿಯ ಸಿಬ್ಬಂದಿ ಇದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.