ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ಕೃಷ್ಣಾರ್ಪಣೆಯಾದ ಕಲ್ಯಾಣ ಚಾಲುಕ್ಯರ ದೇವಾಲಯ

ಬಿ.ಎ. ನಂದಿಕೋಲಮಠ
Published 20 ಮೇ 2024, 5:23 IST
Last Updated 20 ಮೇ 2024, 5:23 IST
ಅಕ್ಷರ ಗಾತ್ರ

ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆ (ಬಸವಸಾಗರ) ಹಿನ್ನಿರಿನಲ್ಲಿ ಮುಳುಗಡೆಯಾಗಿರುವ 32 ಹಳ್ಳಿಗಳ ಪೈಕಿ ಕಲ್ಯಾಣ ಚಾಲುಕ್ಯರ ಕಾಲದ ಹಲ್ಕಾವಟಗಿ ದತ್ತಾತ್ರೆಯ, ನವಲಿಯ ಅನಂತಶಯನ, ಗುಡಿಜಾವೂರು ರಾಮಲಿಂಗೇಶ‍್ವರ ದೇವಾಲಯಗಳು ಐತಿಹಾಸಿಕ ಗತ ವೈಭವ ಸಾರುತ್ತಿವೆ.

ತಾಲ್ಲೂಕಿನ ನವಲಿ ಗ್ರಾಮದ ಬಳಿ ಕೃಷ್ಣಾ ಹಿನ್ನಿರಿನಲ್ಲಿ ಮುಳುಗಡೆಯಾಗಿರುವ ಅನಂತಶಯನ ದೇವಸ್ಥಾನ ಮತ್ತು ಹಲ್ಕಾವಟಗಿ ಬಳಿಯ ದತ್ತಾತ್ರೆಯ ದೇವಸ್ಥಾನಗಳು ಅಣೆಕಟ್ಟೆಯಲ್ಲಿ ನೀರು ಕಡಿಮೆಯಾದಾಗ ಕಾಣಿಸಿಕೊಳ್ಳುತ್ತಿವೆ. ನಾಲ್ಕು ದಶಕಗಳ ಅವಧಿಯಿಂದ ಹಿನ್ನಿರಿನ ಒತ್ತಡಕ್ಕೆ ದೇಗುಲ ಭಾಗಶಃ ಕೃಷ್ಣಾರ್ಪಣೆಯಾಗುತ್ತ ಹೊರಟಿವೆ.

ಕ್ರಿ.ಶ 12, 13ನೇ ಶತಮಾನದ ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಯ ವಿಭಿನ್ನ ಮಾದರಿಯಲ್ಲಿ ನಿರ್ಮಾಣಗೊಂಡ ದೇವಸ್ಥಾನ ಪಶ್ಚಿಮಾಭಿಮುಖವಾಗಿದೆ. ದೇವಾಲಯದ ಮೂರು ದಿಕ್ಕುಗಳ ಮೂಲಕ ಪ್ರವೇಶದ್ವಾರಗಳಿವೆ. ಗರ್ಭಗುಡಿ, ಗರ್ಭಗುಡಿಯ ಮುಂದೆ ತೆರೆದ ಅಂತರಾಳದ ಮಂಟಪ ಗ್ರಾನೈಟ್‍ ಶಿಲೆಗಳ 32 ಕಲ್ಲು ಕಂಬಗಳಿವೆ.

ನವಲಿ ಗ್ರಾಮ ಸ್ಥಳಾಂತರಗೊಂಡ ಸಂದರ್ಭದಲ್ಲಿ ಗರ್ಭಗುಡಿಯಲ್ಲಿದ್ದ ಅನಂತಶಯನ ಪೂರ್ತಿಯನ್ನು ಸ್ಥಳಾಂತರಿಸಿದ್ದು ಅದು ಕೂಡ ಒಡೆದು ಚೂರಾಗಿದ್ದು ನೂತನ ದೇವಾಲಯದ ಹೊರಭಾಗದಲ್ಲಿ ಇರಿಸಲಾಗಿದೆ. ದೇವಸ್ಥಾನ ಹೊರಗೋಡೆ, ಮೇಲ್ಭಾಗದ ಅಲಂಕೃತ ಕುಂಬಿಗಳು ಕುಸಿದು ನೀರುಪಾಲಾಗಿರುವುದು ಕಾಣಸಿಗುತ್ತವೆ.

ಬೃಹದಾಕಾರದ ಕಲ್ಲು ಕಂಬಗಳಿಂದಲೇ ನಿರ್ಮಾಣಗೊಂಡಿರುವ ದೇವಸ್ಥಾನದ ಕಲ್ಲು ಕಂಬಗಳು ಇಂದಿಗೂ ಅಸ್ಥಿತ್ವವನ್ನು ಸಾಕ್ಷಿಕರಿಸುತ್ತಿವೆ. ಶತಮಾನಗಳಷ್ಟು ಹಳೆಯದಾದ ಐತಿಹ್ಯ ಹೊಂದಿರುವ ದೇವಾಲಯ ರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗದೆ ಹೋಗಿರುವುದು ಆಡಳಿತ ವ್ಯವಸ್ಥೆ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.

ನವಲಿ ಜಡಿಶಂಕರಲಿಂಗ ದೇವಸ್ಥಾನ ಸಂರಕ್ಷಿಸಿದ ಜೀರ್ನೋದ್ಧಾರ ಮಾಡಿದಂತೆ ಅನಂತಶಯನ ದೇವಸ್ಥಾನವನ್ನು ಕೂಡ ಸರ್ಕಾರ ಸಂರಕ್ಷಣೆ ಮಾಡಬೇಕು. ಕೃಷ್ಣೆಯ ಒಡಲಲ್ಲಿರುವ ಐತಿಹಾಸಿಕ ಗತವೈಭವ ಸಾರುವ ದೇಗುಲಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂಬುದು ಪ್ರವಾಸಿಗರ ಆಶಯವಾಗಿದೆ.

ನವಲಿ ಬಳಿಯ ಅನಂತಶಯನ ಮತ್ತು ಹಲ್ಕಾವಟಗಿ ದತ್ತಾತ್ರೆಯ ದೇವಸ್ಥಾನ ಜೋರ್ಣೋದ್ಧಾರಕ್ಕೆ ಸರ್ಕಾರ ಮುಂದಾಗಬೇಕು
ಶಂಕರಪ್ಪ ಹೂಗಾರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT