ರಾಯಚೂರು: ವಿದ್ಯುತ್ ಗ್ರಾಹಕರು ಪಾವತಿಸಿದ ₹22 ಲಕ್ಷ ದುರ್ಬಳಕೆ ವಿಷಯದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಭಾರ ಲೆಕ್ಕಾಧಿಕಾರಿ ಹಾಗೂ ಮೂವರು ಸಹಾಯಕರನ್ನು ಬಳ್ಳಾರಿ ವಲಯದ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ಅಮಾನತುಗೊಳಿಸಿದ್ದಾರೆ.
ಜೆಸ್ಕಾಂ ರಾಯಚೂರಿನ ಗ್ರಾಮೀಣ ಉಪ ವಿಭಾಗದ ಕಂದಾಯ ಶಾಖೆಯ ಪ್ರಭಾರ ಲೆಕ್ಕಾಧಿಕಾರಿ ಬಸಮ್ಮ, ಸಹಾಯಕರಾದ ಸುಧಾ, ಪರ್ವೀನಾ ಹಾಗೂ ತಾಯಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಯಾಪದಿನ್ನಿ ಹಾಗೂ ಚಂದ್ರಬಂಡಾ ಭಾಗದ ಗ್ರಾಹಕರಿಂದ ಸಂಗ್ರಹವಾದ ₹22 ಲಕ್ಷ ಹಣ ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಜೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಪವನ್ಸಿಂಗ್ ಅವರು ಕಚೇರಿ ಖಾತೆಗೆ ₹22 ಲಕ್ಷ ಪಾವತಿಯಾಗದಿರುವ ಬಗ್ಗೆ ಮೇಲಾಧಿಕಾರಿಗೆ ವರದಿ ನೀಡಿದ್ದರು.
ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ದಿನಗೂಲಿ ನೌಕರರೊಬ್ಬರ ಮೂಲಕ ಕಂಪ್ಯೂಟರ್ನಲ್ಲಿ ದಾಖಲೆ ಅಪ್ಲೋಡ್ ಮಾಡಿಸುತ್ತಿದ್ದರು. ಮೂರು ವರ್ಷಗಳಿಂದ ಈ ರೀತಿಯಾಗಿ ಕೆಲಸ ಮಾಡಿರುವ ದೂರುಗಳು ಇವೆ. ಜೆಸ್ಕಾಂ ಅಧಿಕಾರಿಗಳು ಈ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ.