ಶಕ್ತಿನಗರ: ಇಲ್ಲಿಂದ ಜೇಗರಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದೆ.
ಈ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಕಾಣ ಸಿಗುತ್ತವೆ. ಈ ಗುಂಡಿಗಳಲ್ಲಿ ಸಂಚರಿಸಲು ಸರ್ಕಸ್ ಮಾಡಬೇಕಾದ ಸ್ಥಿತಿ ಎದುರಾಗಿದೆ.
ದೇವಸೂಗೂರು ಹೋಬಳಿ ವ್ಯಾಪ್ತಿಯ ಬೇವಿನಬೆಂಚಿ, ಜೆ.ಮಲ್ಲಾಪುರ, ಜೇಗರಕಲ್, ಜಿ.ತಿಮ್ಮಾಪುರ ಹಾಗೂ ಹೆಂಬೆರಾಳ ಹೀಗೆ ಪಟ್ಟಿ ಮಾಡುತ್ತ ಹೋದರೆ ಪ್ರತಿ ಗ್ರಾಮದಲ್ಲಿ ರಸ್ತೆ ಸಮಸ್ಯೆ ಹೆಚ್ಚುತ್ತಲೇ ಹೋಗುತ್ತದೆ.
‘ಗ್ರಾಮಗಳಲ್ಲಿ ಒಂದೂ ರಸ್ತೆಯೂ ಸರಿಯಾಗಿಲ್ಲ. ಮಳೆ, ರಸ್ತೆಗಳನ್ನು ಕೆಸರು ಗದ್ದೆಗಳನ್ನಾಗಿ ಪರಿವರ್ತಿಸಿದೆ. ಇದರಲ್ಲಿ ಪ್ರಯಾಣಿಸಿದರೆ ಸರ್ಕಸ್ ಮಾಡಿದಂತಾಗುತ್ತದೆ. ಅನಿವಾರ್ಯವಾಗಿ ಪ್ರತಿನಿತ್ಯ ಜಮೀನುಗಳಿಗೆ ಇದೇ ರಸ್ತೆಯಲ್ಲಿ ಸಂಚರಿಸಬೇಕು’ ಎಂದು ಜೆ.ಮಲ್ಲಾಪುರ ಗ್ರಾಮದ ಯಲ್ಲಪ್ಪ ಅಲವತ್ತುಕೊಂಡರು.
ರಸ್ತೆ ಕಿರಿದಾಗಿದೆ. ವಾಹನಗಳು ಸಂಚರಿಸುವಾಗ ಎದುರಿಗೆ ಬರುವ ವಾಹನಗಳು ಹಾದು ಹೋಗಲು ಸಾಧ್ಯವಾಗುವುದಿಲ್ಲ. ಎದುರು ಬರುವ ವಾಹನಕ್ಕೆ ಸ್ಥಳ ನೀಡಲು ಸರಿಯಲೂ ಆಗುವುದಿಲ್ಲ. ಜೇಗರಕಲ್ ಗ್ರಾಮದಿಂದ ಶಕ್ತಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಕೆಸರು ಗದ್ದೆಯಂತಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳು ಹಾಳಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.