ಲಿಂಗಸುಗೂರು: ‘ಮಾಜಿ ಪ್ರಧಾನಿ ದಿವಂಗತ ರಾಜೀವಗಾಂಧಿ ಅವಧಿಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್. ಅದನ್ನು ಮರೆಮಾಚಿ ಬಿಜೆಪಿ ರಾಮ ಭಕ್ತರು ನಾವು ಎಂದು ಸುಳ್ಳು ಕಥೆ ಕಟ್ಟಿ ಜನರನ್ನು ವಂಚಿಸುತ್ತಿದ್ದಾರೆ’ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪಂಚ ಗ್ಯಾರಂಟಿಗಳ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ವಾರದಲ್ಲಿಯೇ ಈಗ ನೀಡುತ್ತಿರುವ ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ. ಸುಳ್ಳಿತ ಕಂತೆ ಹೆಣೆಯುತ್ತ, ವಂಚಿಸುತ್ತ ಅಧಿಕಾರದ ಚುಕ್ಕಾಣಿ ಹಿಡಿಯುವ ಬಿಜೆಪಿ ಈ ಬಾರಿ 200 ಸ್ಥಾನ ಗೆಲ್ಲುವುದು ಕಷ್ಟಸಾಧ್ಯ’ ಎಂದು ಲೇವಡಿ ಮಾಡಿದರು.
‘ನಾನು ಕುಷ್ಟಗಿ ಕ್ಷೇತ್ರದಲ್ಲಿ ಸೋತಿರುವೆ. ಈಗ ಏನಿದ್ದರು ತಮಗೆ ಹ್ಯಾಟ್ರಿಕ್ ಹಿರೊ ಮಾಡಿರುವ ಲಿಂಗಸುಗೂರು ಕ್ಷೇತ್ರ ಜನತೆಯೆ ಸೇವೆ ಮಾಡುವುದು ಒಂದೇ ಬಾಕಿ. ಭವಿಷ್ಯದಲ್ಲಿ ತಾವು ಲಿಂಗಸುಗೂರಲ್ಲಿ ವಾಸ್ತವ್ಯ ಮಾಡುವೆ. ವರ್ಷದಲ್ಲಿಯೆ ಪಟ್ಟಣಕ್ಕೆ ಸಮಗ್ರ ಕುಡಿವ ನೀರಿನ ಹೊಸ ಯೋಜನೆ ಅನುಷ್ಠಾನಗೊಳಿಸುವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಉಸಿರಿರುವ ವರೆಗೆ ನಿಮ್ಮ ಸೇವೆ ಮಾಡುವೆ’ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಮಾತನಾಡಿ, 'ರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿಲ್ಲ. ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿ ಮೋದಿ ಸರ್ಕಾರ ಇದೆ. ಸುಳ್ಳು ಹೇಳುತ್ತಲೇ ದಶಕ ಕಾಲ ಸರ್ಕಾರ ನಡೆಸಿದ ಪ್ರಧಾನಿ ಮೋದಿ ಮತ್ತೆ ಸುಳ್ಳು ಹೇಳುವ ಮೂಲಕ ಸರ್ಕಾರ ರಚನೆ ಕಸರತ್ತು ನಡೆಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ. ಕುಮಾರನಾಯಕ ಮಾತನಾಡಿ, ‘ತಾವು ಅಖಿತ ಭಾರತ ಆಡಳಿತ ಸೇವೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರುವೆ. ತಾವು ಈ ಬಾರಿ ಮೇ 7ರಂದು ಅತ್ಯಮೂಲ್ಯ ಮತ ಹಾಕಿ ಆಶೀರ್ವದಿಸಿದಲ್ಲಿ ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುವೆ. ಏಳೂವರೆ ದಶಕಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳ ಮೇಲೆ ತಮ್ಮನ್ನು ಬೆಂಬಲಿಸಿ ಆಶೀರ್ವದಿಸಿ’ ಎಂದು ಮನವಿ ಮಾಡಿದರು.
ಪಕ್ಷ ಸೇರ್ಪಡೆ: ಭಾರತೀಯ ಜನತಾ ಪಾರ್ಟಿ, ಕರ್ನಾಟಕ ರಾಜ್ಯ ಪ್ರಗತಿ ಪಕ್ಷ, ಜಾತ್ಯತೀತ ಜನತಾದಳ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಬೆಂಬಲಿಸಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಪಿಸಿಸಿ ಮಾಧ್ಯಮ ವಕ್ತಾರ ರಜಾಕ್ ಉಸ್ತಾದ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿದರು. ಮುಖಂಡರಾದ ಚಂದ್ರಪ್ಪಗೌಡ ಯರದಿಹಾಳ, ವೇಣುಗೋಪಾಲ ನಾಯಕ, ಮಲ್ಲಣ್ಣ ವಾರದ, ಗುಂಡಪ್ಪ ನಾಯಕ, ಚಂದ್ರಶೇಖ ನಾಡಗೌಡ್ರ, ಭೂಪನಗೌಡ ಕರಡಕಲ್ಲ ಇದ್ದರು.
ಪ್ರಮುಖರ ಗೈರು: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಜಿಲ್ಲಾ ಕಾಂಗ್ರೆಸ್ ಮಾಜಿ ವಕ್ತಾರ ಶರಣಪ್ಪ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ ಲಿಂಗಸುಗೂರು, ಶಿವಶಂಕರಗೌಡ ಪಾಟೀಲ ಮುದಗಲ್ಲ ಸೇರಿದಂತೆ ಪುರಸಭೆ ಹಾಗು ಬಹುತೇಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರ ಗೈರು ಎದ್ದು ಕಾಣುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.