ಸಿಂಧನೂರು: ವಾಂತಿ–ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಣಂತಿ ಮೃತಪಟ್ಟಿದ್ದಾರೆ.
ಬಾಣಂತಿ ಲಕ್ಷ್ಮಿ ದುರಗಪ್ಪ ನಾಯಕ ಯದ್ದಲದೊಡ್ಡಿ (30) ಅವರಿಗೆ ವಾಂತಿ–ಭೇದಿ ಕಾಣಿಸಿಕೊಂಡಿತ್ತು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾರೆ. ತಾಯಿ ಇಲ್ಲದೆ 4 ತಿಂಗಳ ಹೆಣ್ಣುಮಗು ಆಸ್ಪತ್ರೆಯಲ್ಲಿ ಅನಾಥವಾಗಿದೆ.
ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮದ ದುರಗಪ್ಪ ಅವರುಲಕ್ಷ್ಮಿ ಅವರನ್ನು ಮದುವೆಯಾಗಿ ನಗರದ ಜನತಾ ಕಾಲೊನಿಯಲ್ಲಿ ಮನೆ ಮಾಡಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
‘ಲಕ್ಷ್ಮಿಗೆ ವಾಂತಿ–ಭೇದಿಯಾದಾಗ ಪತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಎರಡು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಗುಣಮುಖರಾಗದೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಹೋಗುವಂತೆ ಹೇಳಿದ್ದರೂ ಸಹ ಕುಟುಂಬಸ್ಥರು ನಿರಾಕರಿಸಿದ್ದು, ಶನಿವಾರ ಬೆಳಗಿನ ಜಾವ ಮಹಿಳೆ ಸಾವನ್ನಪ್ಪಿದ್ದಾರೆ’ ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ಡಾ.ಮಂಜುನಾಥ ಅವರು ಮಾಹಿತಿ ನೀಡಿದರು.
4 ತಿಂಗಳ ಹೆಣ್ಣು ಮಗು ಅನಾಥವಾಗಿದ್ದು ಸಂಬಂಧಿಕರು ಆಸ್ಪತ್ರೆಯ ಶವಗಾರದ ಮುಂದೆ ಎತ್ತಿಕೊಂಡರು ಸಹ ಮಗು ಅಳುವ ದೃಶ್ಯ ನೋಡುಗರ ಮನ ಕಲಕುವಂತ್ತಿತ್ತು.
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಣಂತಿ ಮಹಿಳೆಯ ನಾಲ್ಕು ತಿಂಗಳ ಮಗುವನ್ನು ಸಂಬಂಧಿಕರು ಎತ್ತಿಕೊಂಡು ಕುಳಿತಿರುವ ದೃಶ್ಯ