ರಾಯಚೂರು: ಕೋಟೆ ಜಾಗ ಅತಿಕ್ರಮಣಕ್ಕೆ ಅವಕಾಶ ನೀಡಿರುವ ನಗರಸಭೆ ಹಾಗೂ ಜಿಲ್ಲಾಡಳಿತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಫಸ್ಟ್ ಆ್ಯಕ್ಷನ್ ಸೋಷಿಯಲ್ ಟೀಮ್ ಅಧ್ಯಕ್ಷ ಶರತಕುಮಾರ್ ಕಳಸ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆ ಸಂರಕ್ಷಣಾ ಸಮಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಐಸಿ ಕಚೇರಿ ಎದುರು ಕೋಟೆ ಕಂದಕದಲ್ಲಿ ಕಟ್ಟಡ ನಿರ್ಮಿಸುತ್ತಿರುವಾಗ ಅಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ದೂರು ಸಲ್ಲಿಸಲಾಗಿತ್ತು. ಸೆಂಥಿಲ್ ವರ್ಗಾವಣೆವರೆಗೂ ಮಾತ್ರ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಿ, ಅನಂತರ ಕಾಮಗಾರಿ ಪೂರ್ಣ ಮಾಡಿಕೊಂಡಿದ್ದಾರೆ ಎಂದರು.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಕಟ್ಟಡಗಳು ತಲೆ ಎತ್ತುತ್ತಿವೆ. ಬಸ್ ನಿಲ್ದಾಣ ಪಕ್ಕದ ಇಂದಿರಾ ಕ್ಯಾಂಟಿನ್, ತರಕಾರಿ ಮಾರುಕಟ್ಟೆ ನಿರ್ಮಾಣದಲ್ಲಿ ಕಾನೂನು ಪಾಲನೆಯಾಗಿಲ್ಲ ಎಂದು ಹೇಳಿದರು.
ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮಹಾವೀರ ಮಾತನಾಡಿ, ‘ತರಕಾರಿ ಮಾರುಕಟ್ಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರಸಭೆಯಿಂದ ಯಾವುದೇ ಸ್ಪಂದನೆಯಿಲ್ಲ. ಅಧ್ಯಕ್ಷೆ, ಉಪಾಧ್ಯಕ್ಷರು ಅಣ್ಣ–ತಂಗಿಯಂತೆ ಆಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷರನ್ನು ಕೇಳಿದರೆ, ಉಪಾಧ್ಯಕ್ಷನನ್ನು ತೋರಿಸುತ್ತಾರೆ. ಉಪಾಧ್ಯಕ್ಷರು ಆಯುಕ್ತರ ಕಡೆಗೆ ಬೆರಳು ಮಾಡುತ್ತಾರೆ. ಸಮಸ್ಯೆಗಳ ಕುರಿತು ಆಯುಕ್ತರನ್ನು ವಿಚಾರಿಸುವುದಕ್ಕೆ ಹೋದರೆ, ಅವರು ಓಡಿ ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.
ಎಂ.ಎಸ್.ಖಾನ್, ಪ್ರಭುನಾಯಕ, ಬಸವರಾಜ, ಕೆ.ವಿ.ಖಾಜಪ್ಪ, ರಮೇಶ, ಉದಯ, ಹನುಮಂತು, ಶಾಲಂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.