ಲಿಂಗಸುಗೂರು: ‘ರಾಯಚೂರು ಜಿಲ್ಲೆ ದಾಸ ಸಾಹಿತ್ಯದ ತವರು ಕ್ಷೇತ್ರ ಎಂಬುದು ಎಲ್ಲರೂ ಒಪ್ಪಲೇಬೇಕಾದ ವಿಷಯ. ಅಲ್ಲದೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದಾಸ ಸಾಹಿತ್ಯ ಮಹಾನ್ ಕೊಡುಗೆ ನೀಡಿದೆ’ ಎಂದು ಮಂತ್ರಾಲಯ ರಾಘವೇಂದ್ರ ಮಠದ ಸುಬಿದೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಸಂಜೆ ರಾಘವೇಂದ್ರ ಮಠದಲ್ಲಿ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ‘ರಾಯಚೂರು ಜಿಲ್ಲೆಯಲ್ಲಿ ವಿಜಯ ದಾಸರು, ಪ್ರಾಣೇಶದಾಸರು, ಗೋಪಾಲ ದಾಸರು ದಾಸ ಸಾಹಿತ್ಯ ದಿಗ್ಗಜರು. ಗೊರೆಬಾಳ ಹನುಮಂತರಾವ್ ವರದೇಂದ್ರ ಹರಿದಾಸ ಸಾಹಿತ್ಯ ಟ್ರಸ್ಟ್ ಸ್ಥಾಪಿಸಿ ದಾಸ ಸಾಹಿತ್ಯದ ಕುರುಹುಗಳನ್ನು ಸಂಗ್ರಹಿಸಿ ಗ್ರಂಥ ರೂಪದಲ್ಲಿ ತರಲು ಶ್ರಮಿಸಿದವರಲ್ಲಿ ಮೊದಲಿಗರು’ ಎಂದರು.
‘ಕಾಲಘಟ್ಟದಲ್ಲಿ ಹಿರಿಯ ಸಾಹಿತಿ ಸೀಮಾಮ, ಭೋಗೇಂದ್ರರಾವ ವಕೀಲರು ದಾಸ ಸಾಹಿತ್ಯದ ಕೃಷಿಯನ್ನು ಅಚ್ಚುಕಟ್ಟಾಗಿ ನಡೆಸುತ್ತ ಬಂದಿದ್ದಾರೆ. ರಾಘವೇಂದ್ರ ಮಠಕ್ಕೂ ಮಂತ್ರಾಲಯ ಮಠಕ್ಕೂ ಅವಿನಾಭಾವ ಸಂಬಂಧಗಳಿವೆ. ಎಂದರು.
ಮಂತ್ರಾಲಯದ ಸುಬಿದೇಂದ್ರ ತೀರ್ಥ ಸ್ವಾಮೀಜಿಯವರಿಗೆ ಬಸವ ಸಾಗರ ವೃತ್ತದಲ್ಲಿ ತೆರೆದ ಅಲಂಕೃತ ವಾಹನದಲ್ಲಿ ಸ್ವಾಗತ ಕೋರಲಲಾಯಿತು. ಗೋಪಿಗೀತಾ ಭಜನಾ ಮಂಡಳಿ, ಗುರುರಾಜ ಭಜನಾಮಂಡಳಿ ಸದಸ್ಯರು ದಾಸರ ಹಾಡುಗಳಿಗೆ ಹೆಜ್ಜೆ ಹಾಕಿದರು. ಮಠದಲ್ಲಿ ಶ್ರೀಗಳಿಗೆ ತುಲಾಭಾರ ನೆರವೇರಿಸಲಾಯಿತು.
ಜ್ಞಾನ ನಿಧಿ ಸ್ಥಾಪಿಸಲು ಸೂಚನೆ:ಸುಬಿದೇಂದ್ರತೀರ್ಥ ಸ್ವಾಮೀಜಿಗಳು ತುಲಾಭಾರದ ಹಣ ₹ 50ಸಾವಿರ ಹಣವನ್ನು ಸ್ಥಳೀಯ ಮಠಕ್ಕೆ ದಾನವಾಗಿ ನೀಡಿದರು. ‘ಈ ಹಣವನ್ನು ಬ್ಯಾಂಕ್ವೊಂದರಲ್ಲಿ ಠೇವಣಿ ಇರಿಸಿ ಜ್ಞಾನನಿಧಿ ಸ್ಥಾಪಿಸಬೇಕು. ಬರುವ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಈ ದಿನಗಳಲ್ಲಿ ಧಾರ್ಮಿಕ, ಶೈಕ್ಷಣಿಕ ಕಾರ್ಯ ನಡೆಸಲು ಬಳಸಿಕೊಳ್ಳಬೇಕು’ ಎಂದರು.
ತುಲಾಭಾರದ ಭಕ್ತಿ ಸೇವೆಯನ್ನು ರಾಘವೇಂದ್ರ ಮಠದ ಅಧ್ಯಕ್ಷ ಶ್ಯಾಮಸುಂದರ ಮುತಾಲಿಕ್ ಮತ್ತು ಮನೋಹರರೆಡ್ಡಿ ಮುನ್ನೂರು ಕುಟುಂಬದವರು ನೆರವೇರಿಸಿದರು. ವಾದಿರಾಜಾಚಾರ್ಯ, ಕೃಷ್ಟಾಚಾರ, ವತ್ಸಲಾಚಾರ್ಯ,
ಕೃಷ್ಣಾಚಾರ ಗೋತಗಿ, ರಂಗಣ್ಣ, ಶೇಷಗಿರಿದಾಸ, ಪ್ರಮೋದ ಕುಲಕರ್ಣಿ, ಗುರುರಾಜ ಮುತಾಲಿಕ, ಅಶೋಕ ದಿಗ್ಗಾವಿ, ಎಂ.ರಾಘವೇಂದ್ರ, ಭೀಮಶೇನ ಕುಲಕರ್ಣಿ, ಹನುಮೇಶ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.