ಮಹಿಳಾ ಒಕ್ಕೂಟಕ್ಕೆ ಕೃಷಿ ಯಂತ್ರಧಾರೆ ನಿರ್ವಹಣೆ: ಒಡಂಬಡಿಕೆ ಪೂರ್ಣ

ಬಿಡದಿ: ಕೃಷಿ ಇಲಾಖೆ ಮತ್ತು ಚಿತ್ರದುರ್ಗದ ವರ್ಷ ಅಗ್ರಿ ಬಿಸಿನೆಸ್ ಸೆಂಟರ್ ಫಾರ್ ಡೆವಲಪ್ಮೆಂಟ್ನಿಂದ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಕೃಷಿ ಯಂತ್ರಧಾರೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ) ಯೋಜನೆ ಮತ್ತು ಸಂಜೀವಿನಿ ದೀನ್ ದಯಾಳ್ ಅಭಿಯಾನ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲೆಯಲ್ಲಿ ರಚಿಸಿರುವ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಈ ಸೇವಾ ಕೇಂದ್ರಗಳ ನಿರ್ವಹಣೆ ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಬಿಡದಿ ಹೋಬಳಿ ಗೋಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಹಳ್ಳಿಯ ಕೇಂದ್ರದ ನಿರ್ವಹಣೆಯನ್ನು ಶನಿವಾರ ಅಧಿಕೃತವಾಗಿ ಕಾವೇರಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಕಂಚಗಾರನಹಳ್ಳಿ ಪಂಚಾಯಿತಿ ಒಕ್ಕೂಟಕ್ಕೆ ನೀಡಲಾಯಿತು. ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕುಮಾರ್ ಮತ್ತು ತಾಲ್ಲೂಕು ವಲಯ ಮೇಲ್ವಿಚಾರಕಿ ಪ್ರೇಮಾ ಅವರ ಸಮ್ಮುಖದಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಮಾರುತಿ ಡಿ.ಇ. ಹಾಗೂ ಜಿಲ್ಲಾ ಉಸ್ತುವಾರಿ ಮಂಜುನಾಥ್ ಕರಾರು ಒಪ್ಪಂದ ಮಾಡಿಕೊಂಡು ಕೇಂದ್ರವನ್ನು ಹಸ್ತಾಂತರಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ ಅವರು ವರ್ಷ ಅಗ್ರಿ ಬಿಸಿನೆಸ್ ಸೆಂಟರ್ ಜೊತೆಗೆ ಚರ್ಚಿಸಿ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಕೃಷಿ ಯಂತ್ರಧಾರೆಯಡಿ ಕೆಲಸ ನೀಡಿದ್ದಾರೆ. ಇದರಿಂದ ಒಕ್ಕೂಟಗಳಿಗೆ ಕೆಲಸದ ಜೊತೆ ಹೆಚ್ಚಿನ ಲಾಭ ದೊರೆಯಲಿದೆ.
ರೈತಾಪಿ ಜನರು ದಿನನಿತ್ಯ ವ್ಯವಸಾಯಕ್ಕೆ ಬಳಸುವ 35ಕ್ಕೂ ಹೆಚ್ಚಿನ ₹ 52 ಲಕ್ಷ ಮೌಲ್ಯದ ಕೃಷಿ ಯಂತ್ರಗಳನ್ನು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ನಿರ್ವಹಣೆ ಮಾಡಲಿವೆ.
ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಕಾವೇರಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.