ಕನಕಪುರ: ಜಮೀನು ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿದ್ದರಿಂದ ಬಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅರಳಗಡಕಲು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಕೋಡಿಹಳ್ಳಿ ಹೋಬಳಿಯ ಬಿಜ್ಜಳ್ಳಿ ಗ್ರಾಮದ ಸ್ವಾಮಿ ಅವರ ಪುತ್ರ ಚಂದನ್ (10) ಮೃತ ಬಾಲಕ.
ಕೋಡಿಹಳ್ಳಿ ಹಿಪ್ಪೋಕ್ಯಾಂಪಸ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಚಂದನ್, ಶನಿವಾರ ತಾಯಿಯ ಮನೆ ಅರಳಗಡಕಲು ಗ್ರಾಮಕ್ಕೆ ಬಂದಿದ್ದ. ಅವರ ಜಮೀನಿನಲ್ಲಿ ಟ್ರಾಕ್ಟರ್ನಿಂದ ಉಳುಮೆ ಕೆಲಸ ನಡೆಯುತ್ತಿದ್ದಾಗ, ಬಾಲಕ ಸಹ ಟ್ರಾಕ್ಟರ್ ಏರಿ ಕುಳಿತಿದ್ದ. ಉಳುಮೆ ಮಾಡುತ್ತಿದ್ದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರಾಕ್ಟರ್ ಪಲ್ಟಿಯಾಗಿದೆ. ಆಗ ತಳದಲ್ಲಿ ಸಿಲುಕಿದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಕುರಿತು ಟ್ರಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು ಎಂದು ಕೋಡಿಹಳ್ಳಿ ಠಾಣೆ ಪೊಲೀಸರು ತಿಳಿಸಿದರು. ಅಂತ್ಯಕ್ರಿಯೆ ಬಿಜ್ಜಳ್ಳಿಯಲ್ಲಿ ಭಾನುವಾರ ನೆರವೇರಿತು.