ಮಾಗಡಿ: ಗ್ರಾಮದೇವತೆಗಳ ಆರಾಧನೆಯಿಂದ ಬದುಕಿನಲ್ಲಿ ನೆಮ್ಮದಿ ಸಿಗಲಿದೆ. ಅಲ್ಲದೆ, ಮಳೆ ಬೆಳೆಯಾಗಿ ಸಕಲರು ಸಂತೃಪ್ತಿಯಿಂದ ಬದುಕಲು ಸಾಧ್ಯವಾಗಲಿದೆ ಎಂದು ಪುರಸಭೆ ಸದಸ್ಯ.ಆರ್.ಸುರೇಶ್ ತಿಳಿಸಿದರು.
ಪಟ್ಟಣದ ಕೋಟಪ್ಪನಪಾಳ್ಯ, ಚನ್ನಪ್ಪ ಬಡಾವಣೆಯಲ್ಲಿ ಸೋಮವಾರ ರಾತ್ರಿ ನಡೆದ ಚೌಡೇಶ್ವರಿ ಅಮ್ಮನವರ ಊರಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತಾಪಿ ವರ್ಗದವರು ಸುಗ್ಗಿ ನಂತರ ಸಕಲ ಚರಾಚರ ಜೀವಿಜಂತುಗಳಿಗೆ ಒಳಿತಾಗಲಿ ಎಂದು ಕುಲದೇವತೆ ಮತ್ತು ಗ್ರಾಮದೇವತೆಗಳನ್ನು ಆರಾಧನೆ ಮಾಡಿ, ನೆಂಟರಿಗೆ ಸಾಮೂಹಿಕವಾಗಿ ಊಟ ಹಾಕಿಸುವುದು ಪುರಾತನ ಕಾಲದಿಂದಲೂ ನಡೆದು ಬಂದ ವಾಡಿಕೆ ಎಂದು ತಿಳಿಸಿದರು.
ಚನ್ನಪ್ಪ ಬಡಾವಣೆ ಮುಖಂಡ ವೆಂಕಟೇಶ್.ಜಿ.ಮಾತನಾಡಿ, ಪೂರ್ವಿಕರು ನಿಸ್ಪೃಹ ಹೃದಯದವರು. ಮನೆದೇವತೆ ಚೌಡೇಶ್ವರಿ, ಕಾಳಿಕಾಂಬ ದೇವಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಪೂಜೆ, ಬಲಿದಾನ ಹಿಂದಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ ಎಂದರು.