ಮಾಗಡಿ: ‘ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರು ಯಾರ್ಯಾರ ವಸ್ತ್ರಾಪಹರಣ ಮಾಡಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುವೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಮಾಗಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ರಾವಣ ಎಂದು ಟೀಕಿಸಿದ ಮುನಿರತ್ನ ಅವರ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು.
‘ಯಾರ ಸೀರೆಗೆ ಮುನಿರತ್ನ ಕೈ ಹಾಕಿ ಎಳೆದ್ರು, ಎಲ್ಲವನ್ನೂ ತೋರಿಸೋಣ. ಗೋವಿಂದ ಅರೆ ಗೋವಿಂದ, ಮುನಿರತ್ನ ನಾಯ್ಡು ಗೋವಿಂದ ಅಂತ ಬರುವ ಹಾಡನ್ನು ಸಹ ಹಾಕುತ್ತೇವೆ. ಆ ಹಾಡಲ್ಲೇ ಎಲ್ಲವೂ ಇದೆ’ ಎಂದು ವ್ಯಂಗ್ಯವಾಡಿದರು.
‘ಸುರೇಶ್ ಅವರನ್ನು ರಾವಣನಿಗೆ ಹೋಲಿಸಿ ಅಪಪ್ರಚಾರ ಮಾತನಾಡುವವರು ಅಭಿವೃದ್ಧಿ ಕುರಿತು ಅವರ ಅಭ್ಯರ್ಥಿಯೊಂದಿಗೆ ಚರ್ಚೆಗೆ ಬರಲಿ. ನಾವು ನಮ್ಮ ಅಭ್ಯರ್ಥಿ ಕರೆ ತರುತ್ತೇವೆ. ಸಿನಿಮಾ ತೆಗೆಯುವರು ಸ್ಟೋರಿ ಬರೆಯುವುದನ್ನು ಬಿಟ್ಟು, ಈಗಲಾದರೂ ಅಭಿವೃದ್ಧಿ ವಿಚಾರ ಮಾತನಾಡಲಿ’ ಎಂದು ಮುನಿರತ್ನ ಅವರಿಗೆ ತಿರುಗೇಟು ನೀಡಿದರು.