ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರವನ್ನು ಪ್ರಶ್ನಿಸುವುದು ನಾನೊಬ್ಬನೇ: ಎಚ್‌.ಡಿ. ಕುಮಾರಸ್ವಾಮಿ

ದುಡ್ಡಿದ್ದರೂ ರೈತರಿಗೆ ಯಾಕೆ ಪರಿಹಾರ ಕೊಟ್ಟಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ
Published 22 ನವೆಂಬರ್ 2023, 5:42 IST
Last Updated 22 ನವೆಂಬರ್ 2023, 5:42 IST
ಅಕ್ಷರ ಗಾತ್ರ

ರಾಮನಗರ: ‘ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನಿಸುವುದು ಕುಮಾರಸ್ವಾಮಿ ಒಬ್ಬನೇ. ಇಲ್ಲಿಯವರೆಗೂ ನಾನು ಎತ್ತಿದ ಒಂದೇ ಒಂದು ಪ್ರಶ್ನೆಗೂ ಸರ್ಕಾರ ಇನ್ನೂ ಉತ್ತರ ಕೊಟ್ಟಿಲ್ಲ’ ಎಂದು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದಾರೆ.

‘ಸರ್ಕಾರದ ವರ್ಗಾವಣೆ ದಂಧೆ, ಅಕ್ರಮ ಸಂಪತ್ತು ಮುಂತಾದ ವಿಷಯ ಗಳ ಬಗ್ಗೆ ಧ್ವನಿ ಎತ್ತಿದ್ದು ನಾನು. ಸರ್ಕಾರದ ಅಕ್ರಮಗಳ ಕುರಿತು ಪ್ರಶ್ನೆ ಮಾಡಿದರೆ ನನ್ನ ವಿರುದ್ಧ ಪೋಸ್ಟರ್ ಅಂಟಿಸುತ್ತಾರೆ. ಎಷ್ಟಾದರೂ ಅಂಟಿಸಿಕೊಳ್ಳಲಿ. ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕಿನ ದಾಸೇಗೌಡನದೊಡ್ಡಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಾಹಿತಿ ಪ್ರಕಾರ ಬರದಿಂದಾಗಿ ರಾಜ್ಯದಲ್ಲಿ ₹33 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗಳಲ್ಲಿ ₹800 ಕೋಟಿ ಹಣವಿದೆ ಎನ್ನುವ ಸರ್ಕಾರ, ಬೆಳೆ ನಷ್ಟ ಅನುಭವಿಸಿದ ರೈತರಿಗೆ
ಯಾಕಿನ್ನೂ ಪರಿಹಾರ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. 

ರೈತರಿಗೆ ಪರಿಹಾರ ಕೊಡದಿದ್ದರೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಯಾವ ಉದ್ದೇಶಕ್ಕೆ ಹಣ ಇಟ್ಟಿದ್ದಾರೆ. ಫಸಲ್ ಬಿಮಾ ಯೋಜನೆಯಡಿ ರೈತರಿಗಿಂತ ಹೆಚ್ಚಾಗಿ ಖಾಸಗಿ ಕಂಪನಿಗಳಿಗೆ ಲಾಭ ವಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ನುಡಿದಂತೆ ನಡೆದಿದ್ದೇವೆ ಅಂತಾರೆ. ಅದು ಇದೇನಾ ಎಂದು ಕೇಳಿದರು.

ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಶಾಲಾ ಕಟ್ಟಡ ಕಟ್ಟಲು ದುಡ್ಡಿಲ್ಲವೆಂದು ಸಿಎಸ್ಆರ್ ಅನು ದಾನ ಕೇಳುತ್ತಿದ್ದಾರೆ. ಸಿ.ಎಂ ಮನೆ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಶಾಲೆ ಕಟ್ಟಡ ನಿರ್ಮಾಣಕ್ಕೆ ಹಣವಿಲ್ಲ. ಆದರೆ, ನಿತ್ಯ ಫೋಟೊ ಹಾಕೊಂಡು ಪೋಸ್‌ ಕೊಡ್ತಾರೆ. ವಾಸ್ತವ ಸ್ಥಿತಿಯೇ ಬೇರೆ ಇದೆ ಎಂದರು.

‘ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಜನರ ಜನರ ಕಷ್ಟ,ಸುಖ ಕೇಳಲು ಬಂದಿಲ್ಲ. ಜನರ ಹಣ ಲೂಟಿ ಮಾಡುವ ನಿಗಮ, ಮಂಡಳಿ ನೇಮಕ ಮಾಡುವುದಕ್ಕೆ
ಬರುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಜೊತೆಗಿನ ಮೈತ್ರಿ ಕುರಿತು ನಿಲುವು ಬದಲಾಯಿಸಿಕೊಳ್ಳಿ’ ಎಂಬ ಉಚ್ಛಾಟಿತ ಜೆಡಿಎಸ್ ಅಧ್ಯಕ್ಷ
ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಮಾತನಾಡಲಿ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯ ಕತೆ ಇಲ್ಲ’ ಎಂದರು.

‘ಕೊಳ್ಳೆ ಹೊಡೆದಾಗಿದೆ’

‘ಎಚ್‌ಡಿಕೆ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವೆ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು ‘ಕೊಳ್ಳೆ ಹೊಡೆದಾಗಿದೆ. ಅವರ ಜೀವನವೇನು ಅಂತಾ ಗೊತ್ತಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ ಸುಳ್ಳರು ಒಂದೇ. ಭಗವಂತ ಇದ್ದಾನೆ. ಅಂತಿಮವಾಗಿ ಎಲ್ಲಾ ತೀರ್ಮಾನ ಮಾಡ್ತಾನೆ. ಈ ಸಮಾಜದಲ್ಲಿ ಹಣದ ಮದ ಇದ್ದವರು ಎಲ್ಲವನ್ನೂ ಕೊಂಡುಕೊಳ್ಳುತ್ತೇವೆ ಅಂದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಅಂತಿಮ ಇದ್ದೇ ಇದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT