ಹಾರೋಹಳ್ಳಿ: ಕ್ಯಾನ್ಸರ್ ಗೆದ್ದ ಈ ಮಹಿಳೆ ಪ್ರಗತಿಪರ ಕೃಷಿಕಳಾಗಿ ಬದುಕು ಗೆಲುವಾಗಿಸಿಕೊಂಡಿದ್ದಾರೆ. ಆರೋಗ್ಯ ಒತ್ತಡದ ನಡುವೆಯೂ ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡು ಮಾದರಿಯಾಗಿದ್ದಾರೆ.
ತಾಲ್ಲೂಕಿನ ಟಿ.ಹೊಸಹಳ್ಳಿ ಪ್ರಗತಿಪರ ರೈತ ಮಹಿಳೆ ಯಶೋಧ ನಾಗರಾಜು ಕಿದ್ವಾಯಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿದ್ದರು. ಆರು ವರ್ಷದ ಹಿಂದೆ ಸ್ತನ ಕ್ಯಾನ್ಸರ್ಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸಿದವರು. ಆರೋಗ್ಯದಲ್ಲಿ ಸುಧಾರಣೆ ಕಂಡ ಮೇಲೆ ಕೃಷಿಯತ್ತ ಮುಖ ಮಾಡಿದ್ದಾರೆ.
ಕೃಷಿಯಲ್ಲಿ ರಾಸಾಯನಿಕ ಬಳಕೆ ಬಿಟ್ಟು ಸಾವಯವ ಪದ್ಧತಿ ಅನುಸರಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಮಾವು, ತೆಂಗು, ಪಪ್ಪಾಯ, ಕಾಳು ಮೆಣಸು, ಅಂಜೂರ, ರಾಮಫಲ, ಸೀಬೆ, ನಿಂಬೆ, ಸೊಪ್ಪು, ಕ್ಯಾಪ್ಸಿಕಂ, ನುಗ್ಗೆಕಾಯಿ, ಕಾಫಿ ಬೆಳೆಯಿಂದ ಆದಾಯ ಗಳಿಸುತ್ತಿದ್ದಾರೆ.
ಸಾವಯವ ಕೃಷಿಗೆ ಒತ್ತು: ವಿಷಮುಕ್ತ ಆಹಾರ ತ್ಯಜಿಸಬೇಕು ಎನ್ನುವ ಉದ್ದೇಶದಿಂದ ಸಹಜ ಕೃಷಿಗೆ ಒತ್ತು ನೀಡಿದ್ದಾರೆ. ದನ-ಕುರಿ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದಾರೆ.
ಅರಣ್ಯ ಕೃಷಿ: ಅರಣ್ಯ ಕೃಷಿ ಭಾಗವಾಗಿ ಜಮೀನಿನ ಬದುಗಳಲ್ಲಿ ತೇಗ, ಸ್ವಿಲ್ವರ್, ಹೆಬ್ಬೇವು, ಬೇವು, ಹೊಂಗೆ ಸೇರಿ ಸುಮಾರು 500 ಮಹಾಗನಿ ಮರಗಳನ್ನು ಬೆಳೆಸಿದ್ದಾರೆ. ಸಿಲ್ವರ್ ಮರಗಳಿಗೆ ಕಾಳು ಮೆಣಸು, ಎಲೆ ಬಳಿ ಹಾಕಲಾಗಿದೆ.
ಇವರ ಕೃಷಿ ಕೆಲಸಕ್ಕೆ ಪತಿ ನಾಗರಾಜ್ ಕೂಡ ಕೈಜೋಡಿಸಿದ್ದಾರೆ. ಕೃಷಿಯಿಂದ ದೂರ ಉಳಿದವರಿಗೂ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಪ್ರೇರಣೆಯಾಗಿದ್ದಾರೆ.
’ನನ್ನ ಕ್ಯಾನ್ಸರ್ ತಡೆಗೆ ಸಹಕಾರಿಯಾಗಿ ಸಾವಯವ ಆಹಾರವೂ ಸಂಜೀವಿನಿಯಾಗಿದೆ. ವಿಷಯುಕ್ತ ಆಹಾರ ಪದ್ಧತಿ ತೊರೆದು ಪೌಷ್ಟಿಯುಕ್ತ ಆಹಾರಕ್ಕೆ ಒತ್ತು ನೀಡಿದ್ದರಿಂದ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಂಡಿದೆ‘ ಎನ್ನುತ್ತಾರೆ ಯಶೋಧ.