ಕನಕಪುರ: ನಗರದ ಸುತ್ತಮುತ್ತ ಕಂಡುಬಂದ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ರಾತ್ರಿ ಹಲವೆಡೆ ಬೋನು ಇಟ್ಟಿದ್ದಾರೆ.
ನಗರದ ಮೆಳೆಕೋಟೆ, ಗಿರೀಶ್ ಕಲ್ಯಾಣ ಮಂಟಪದ ಹಿಂಭಾಗದ ನಿರ್ವಾಣೇಶ್ವರ ನಗರದಲ್ಲಿ ಚಿರತೆ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿತ್ತು. ಇದರಿಂದ ನಗರದ ಜನತೆ ಭಯಭೀತರಾಗಿದ್ದಾರೆ.
ಭಾನುವಾರ ನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ನಡೆಸಿದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ನಿರ್ವಾಣೇಶ್ವರ ನಗರ ಮತ್ತು ಮೆಳೆಕೋಟೆ ಜನತೆ ಮತ್ತು ಆ ವಾರ್ಡಿನ ನಗರಸಭೆ ಸದಸ್ಯರು ತಮ್ಮ ಬಡಾವಣೆಯಲ್ಲಿ ಓಡಾಡುತ್ತಿರುವ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುವಂತೆ ಅರಣ್ಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದರು.