ಭದ್ರಾವತಿ : ತಾಲ್ಲೂಕಿನ ಅಂತರಗಂಗೆ ಗ್ರಾಮದ ಶಿವಲಿಂಗಯ್ಯ ತಮ್ಮ 4 ರಿಂದ 5 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿ, ವಿಶೇಷವಾಗಿ ಹೂವಿನ ಬೆಳೆಗೆ ಹೆಚ್ಚು ಒತ್ತು ನೀಡಿ ಲಾಭಗಳಿಸಿ 2023ನೇ ವರ್ಷದ ಶ್ರೇಷ್ಠ ರೈತ ಎಂಬ ಬಿರುದು ಮತ್ತು ಆತ್ಮ ಪ್ರಶಸ್ತಿ ಪಡೆದಿದ್ದಾರೆ.
ಕಾಕಡ ಮಲ್ಲಿಗೆ, ಹೈಬ್ರೀಡ್ ಮಲ್ಲಿಗೆ (ಕೋಲ್ಕತ್ತಾ), ದುಂಡು ಮಲ್ಲಿಗೆ ಇವುಗಳನ್ನು ಪ್ರತಿ 10 ಗುಂಟೆಗಳಾಗಿ ವಿಂಗಡಿಸಿ ಬೆಳೆದಿದ್ದಾರೆ. ಮದುವೆ ಸಮಾರಂಭಗಳ ದಿನಗಳಲ್ಲಿ ಹಾರ ಮಾಡಲು ವಿಶೇಷ ಬೇಡಿಕೆ ಇರುತ್ತದೆ. ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂಗಳಿಗೆ ಕೆ.ಜಿಗೆ ₹400ಕ್ಕೂ ಹೆಚ್ಚು ದರವಿದೆ. ಇದರಿಂದ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ.
ಹೈನುಗಾರಿಕೆ :
ಅಡಿಕೆ ತೋಟ, ಎರಡು ಎಕರೆ ತೆಂಗು ಉಪಕಸುಬುಗಳಾಗಿ ಬದಿಗಳಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಇದರ ಜೊತೆಗೆ 20 ರಿಂದ 25 ಕುರಿ, ಆಡು, ಮೇಕೆ ಸಾಕಾಣಿಕೆ ಐದು ಹಸು, ಕೋಳಿಗಳು ಇವೆ. ಮೇವಿಗಾಗಿ ಪಕ್ಕದ ಐದು ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಸಂಪೂರ್ಣ ಭತ್ತ ಬೆಳೆಯಲಾಗುತ್ತದೆ. ಅದರ ಸಂಪೂರ್ಣ ಹುಲ್ಲನ್ನು ಜಾನುವಾರುಗಳಿಗೆ ಮೇವು ಆಗಿ ಬಳಸಲಾಗುತ್ತದೆ. ಗುತ್ತಿಗೆ ಪಡೆದ ಭೂಮಿಗೆ ಲಾಭವಿರಲಿ ನಷ್ಟವಿರಲಿ ನಿಗದಿತ ಹಣ ನೀಡಲಾಗುತ್ತಿದೆ.
ಜೀವಾಮೃತ ವಿಧಾನ :
ಬೆಳೆ ಔಷಧಿಗಾಗಿ ಜೀವಾಮೃತ ವಿಧಾನ ಅಳವಡಿಸಿಕೊಳ್ಳಲಾಗಿದೆ, ನಾಟಿ ಗೊಬ್ಬರಕ್ಕೆ ಅನುಕೂಲವಾಗಿದೆ. ಗೋಮೂತ್ರ ಮತ್ತು ಇತರೆ ಸಂಗ್ರಹವಾದ ಕೊಳೆತ ತರಕಾರಿ, ಗಿಡಗಂಟೆಗಳನ್ನು ಡ್ರಂಗಳಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಸಂರಕ್ಷಿಸಲ್ಪಟ್ಟು ನಂತರ ಅವುಗಳನ್ನು ಗೊಬ್ಬರವಾಗಿ ಪರಿವರ್ತಿಸಿ ಬೆಳೆಗಳಿಗೆ ಸಿಂಪಡಿಸಲಾಗುತ್ತಿದೆ.
ಆತ್ಮಪ್ರಶಸ್ತಿ :
ಬರಗಾಲದ ನಡುವೆಯೂ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಲಾಭ ಪಡೆಯಬಹುದು ಎಂದು ತೋರಿಸಿಕೊಟ್ಟ ರೈತ ಎಂದು ಈಚೆಗೆ ಕುವೆಂಪುರಂಗ ಮಂದಿರದಲ್ಲಿ ನಡೆದ ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ 2023 ನೇ ವರ್ಷದ ಸಮಗ್ರ ಶ್ರೇಷ್ಠ ರೈತ ಎಂಬ ಬಿರುದಿನೊಂದಿಗೆ ಆತ್ಮಪ್ರಶಸ್ತಿ ದೊರೆತಿದೆ.
ಶಿವಲಿಂಗಯ್ಯ ಅವರು ಐದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕಾಕಡ, ಮಲ್ಲಿಗೆ ಹೂವು ಬೆಳೆದು ಉತ್ತಮ ಲಾಭ ಪಡೆದಿದ್ದು ಇಲಾಖೆಯಿಂದ ಪ್ರಶಸ್ತಿಗೆ ಹೆಸರು ದಾಖಲಿಸಿಕೊಳ್ಳಲಾಯಿತು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯು.ಎಚ್.ರವಿಕುಮಾರ್ ಹೇಳಿದರು.
’ಇಲಾಖೆಯಿಂದ ರೈತರಿಗೆ ಅನೇಕ ರೀತಿಯ ಮಾರ್ಗದರ್ಶನಗಳು, ಉಚಿತ ಕಾರ್ಯಾಗಾರ ಮತ್ತು ಸಬ್ಸಿಡಿ ರೀತಿಯಲ್ಲಿ ಸಾಲ ಸೌಲಭ್ಯಗಳಿವೆ. ರೈತರು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ಶಿವಲಿಂಗಯ್ಯ ಅವರ ಸಮಗ್ರ ಕೃಷಿ ಪದ್ಧತಿ ಮಾದರಿಯಾಗಿ ತೆಗೆದುಕೊಳ್ಳಬೇಕು‘ ಎಂದು ತಾಲ್ಲೂಕು ಕೃಷಿ ಅಧಿಕಾರಿ ಸಂದೀಪ್ ತಿಳಿಸಿದರು.
ಕುಟುಂಬದ ಪ್ರತಿಯೊಬ್ಬರು ನನ್ನೊಂದಿಗೆ ಕೈಜೋಡಿಸಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅದರಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹೆಚ್ಚು ಸಹಕರಿಸಿದ್ದಾರೆ. ಇಲಾಖೆಯಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಒದಗಿಸಿ ಕೊಟ್ಟಿದ್ದಾರೆ.
– ಶಿವಲಿಂಗಯ್ಯ ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.