ಕೊಡಿಗೇನಹಳ್ಳಿ: ಅಕ್ಷರ ದಾಸೋಹದ ಸಾಮಗ್ರಿ ಹಾಗೂ ಸಿಲಿಂಡರ್ ಕಳುವು ಮಾಡಿದ್ದ ಆರೋಪಿಗಳನ್ನು ಕೊಡಿಗೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪುರವರ ಹೋಬಳಿ ಕೋಡಗದಾಲ ಗ್ರಾಮದ ಕಾಳಿದಾಸ ಪ್ರೌಢಶಾಲೆ ಅಕ್ಷರ ದಾಸೋಹದ ಕೊಠಡಿಯ ಎರಡು ಬಾಗಿಲುಗಳ ಬೀಗ ಒಡೆದಿದ್ದ ಕಳ್ಳರು 236 ಕೆ.ಜಿ ಬೇಳೆ, 200 ಕೆಜಿ ಅಕ್ಕಿ, 65 ಕೆ.ಜಿ ಗೋಧಿ, ಎರಡು ಸಿಲಿಂಡರ್ ಸೇರಿದಂತೆ ₹16 ಸಾವಿರ ಮೌಲ್ಯದ ವಸ್ತುಗಳನ್ನು ಕಳುವು ಮಾಡಿದ್ದರು. ಈ ಬಗ್ಗೆ ನವೆಂಬರ್ 23ರಂದು ಪ್ರಕರಣ ದಾಖಲಾಗಿತ್ತು.
ಕೊಡಿಗೇನಹಳ್ಳಿ ಠಾಣೆಯ ಪಿಎಸ್ಐ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಆರೋಪಿ ಮಧುಗಿರಿ ದೊಡ್ಡಪೇಟೆ ನವೀನ್, ಕರಡಿಪುರದ ಆಫ್ತಾಬ್ ಅವರನ್ನು ಬಂಧಿಸಿ ಕಳವು ಮಾಡಲು ಬಳಸಿದ್ದ ಲಗೇಜ್ ಆಟೊ ಹಾಗೂ ನಾಲ್ಕು ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಬ್ಬಂದಿ ಎಂ.ಮಂಜುನಾಥ್, ರಮೇಶ್, ನರಸಿಂಹಮೂರ್ತಿ, ಜಯರಾಮಯ್ಯ, ಶ್ರೀನಿವಾಸ್, ಪಾಂಡುರಂಗರಾವ್, ಬೋಗನರಸಿಂಹಯ್ಯ, ಬಾಲಾಜಿನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.