ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ಗೆ ತನ್ನದೇ ಇತಿಹಾಸ ಇದೆ. ಕಳೆದ ಚುನಾವಣೆಯಲ್ಲಿ ಮುಖಂಡರ ಗೊಂದಲದಿಂದ ಸೋಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಲಾಗುವುದು ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಅವರನ್ನು ಮುಖಂಡರಾದ ಬೆಳಗುಂಬ ವೆಂಕಟೇಶ್, ಬಸವರಾಜು, ಶ್ರೀನಿವಾಸ್, ನರಸಿಂಹರಾಜು, ಟಿ.ಪಿ.ಮಂಜುನಾಥ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಸಣ್ಣ–ಪುಟ್ಟ ವೈಮನಸ್ಸಿನಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ನಮ್ಮ ಮನೆಗೆ ಬಂದು ಪಕ್ಷಕ್ಕೆ ಬರುವಂತೆ ಕೇಳಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷಕ್ಕೆ ಮರಳಿದ್ದೇನೆ’ ಎಂದರು.
ಬೆಳಗುಂಬ ವೆಂಕಟೇಶ್, ‘ಹೆಬ್ಬೂರು- ಗೂಳೂರು ಏತ ನೀರಾವರಿ ಜಾರಿಯ ಹಿಂದೆ ನಿಂಗಪ್ಪ ಅವರ ಶ್ರಮವಿದೆ. ಏತ ನೀರಾವರಿಗಾಗಿ ದೇವಲಾಪುರದ ಕೆರೆಯಿಂದ ಗೂಳೂರಿನ ವರೆಗೆ ಪಾದಯಾತ್ರೆ ನಡೆಸಿದ್ದರು. ಇದರ ಫಲವಾಗಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಯೋಜನೆಗೆ ಚಾಲನೆ ದೊರೆಯಿತು’ ಎಂದು ಸ್ಮರಿಸಿದರು.