ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಕರ ದಿಕ್ಕು ತಪ್ಪಿಸುತ್ತಿದ್ದಾರೆ: ವಿ.ಅಂಬರೀಶ್‌

ಡಿವೈಎಫ್‌ಐ ಜಿಲ್ಲಾ ಸಮಾವೇಶದಲ್ಲಿ ವಿ.ಅಂಬರೀಶ್‌ ಹೇಳಿಕೆ
Published 6 ಫೆಬ್ರುವರಿ 2024, 6:28 IST
Last Updated 6 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ತುಮಕೂರು: ನಿರುದ್ಯೋಗ ಸೇರಿದಂತೆ ಇತರೆ ಸಮಸ್ಯೆಗಳನ್ನು ಮರೆಮಾಚಿ ಯುವ ಸಮೂಹವನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ರಾಜ್ಯ ಮುಖಂಡ ವಿ.ಅಂಬರೀಶ್‌ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಡಿವೈಎಫ್‌ಐ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿ, ‘ಯುವಕರನ್ನು ಬಳಸಿಕೊಂಡು ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಅಗತ್ಯವಾದ ಚರ್ಚೆಯನ್ನು ಕೈ ಬಿಟ್ಟು, ಬೇಡದ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ’ ಎಂದರು.

ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಮುಂದಾಗುತ್ತಿಲ್ಲ. ವಿದ್ಯಾಭ್ಯಾಸ ಮುಗಿಸಿದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿದ್ದು, ಎಲ್ಲರು ಜಾಗೃತರಾಗಬೇಕು ಎಂದು ಎಚ್ಚರಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕೇಂದ್ರ ಸರ್ಕಾರ ಲಾಭದಲ್ಲಿದ್ದ ರೈಲ್ವೆಯನ್ನು ಖಾಸಗೀಕರಣಗೊಳಿಸಿದೆ. ಕೇಂದ್ರದ ನೀತಿಗಳ ವಿರುದ್ಧ ಯುವ ಜನರು ಹೋರಾಟ ರೂಪಿಸಬೇಕು’ ಎಂದು ಕರೆ ನೀಡಿದರು.

ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಘವೇಂದ್ರ, ‘ಡಿವೈಎಫ್‌ಐ ಸಂಘಟನೆ ಹಲವು ಹೋರಾಟಗಳ ಮುಖಾಂತರ ಜನರ ಮಧ್ಯೆ ಶಾಶ್ವತವಾಗಿ ಉಳಿದುಕೊಂಡಿದೆ. ಕಳೆದ 25 ವರ್ಷಗಳ ಹಿಂದೆ ‘ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ನೀಡಿ’ ಎಂದು ನಡೆಸುತ್ತಿದ್ದ ಹೋರಾಟದ ಫಲ ಇಂದಿನ ಸರ್ಕಾರ ನಿರುದ್ಯೋಗ ಭತ್ಯೆ ಘೋಷಿಸಿದೆ. ಯುವಕರು ತಮ್ಮ ಉದ್ಯೋಗದ ಜೊತೆ ಸಂಘಟನೆ ಕಟ್ಟಬೇಕು’ ಎಂದು ಸಲಹೆ ಮಾಡಿದರು.

ಉಪನ್ಯಾಸಕ ಪವನ್‍ ಗಂಗಾಧರ್‌, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಇ.ಶಿವಣ್ಣ, ಮುಖಂಡರಾದ ಎಂ.ಆರ್‌.ನಾಗರಾಜು, ಎಂ.ಜಿ.ಮಂಜುನಾಥ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT