ತುಮಕೂರು: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಳೆದ 40 ದಿನಗಳಿಂದ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶನಿವಾರ ಅಂತ್ಯಗೊಳಿಸಿದ್ದಾರೆ.
ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ ₹15 ಸಾವಿರ ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಜ. 8ರಂದು ಧರಣಿ ಆರಂಭಿಸಿದ್ದರು. ಉಪವಾಸ ಸತ್ಯಾಗ್ರಹ, ಪಂಜಿನ ಮೆರವಣಿಗೆ, ಟ್ರ್ಯಾಕ್ಟರ್ ರ್ಯಾಲಿ ಮತ್ತು ನಗರ ಬಂದ್ಗೆ ಕರೆ ನೀಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಮುಂದಿನ ಹಂತದ ಹೋರಾಟ ರೂಪಿಸುವ ಸಲುವಾಗಿ ಧರಣಿ ಅಂತ್ಯಗೊಳಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ ತಿಳಿಸಿದರು.
ರೈತ ಮುಖಂಡರಾದ ಹನುಮಂತರಾಯಪ್ಪ, ಸಣ್ಣ ಧರ್ಮೇಗೌಡ, ನಾಗಣ್ಣ, ಬಾಳೇಗೌಡ, ಚಂದ್ರೇಗೌಡ, ಮಧುಸೂದನ್, ಮೊಹಮ್ಮದ್ಗೌಸ್ ಮೊದಲಾದವರು ಭಾಗವಹಿಸಿದ್ದರು.