ತುರುವೇಕೆರೆ: ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದ ಹಿಂಭಾಗದ ಮನೆಯೊಂದರಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಮನೆಯೊಂದು ಸಂಪೂರ್ಣ ಭಸ್ಮವಾಗಿದೆ.
ವಿಶ್ವನಾಥ್ ಅವರಿಗೆ ಸೇರಿದ ಮನೆಯಲ್ಲಿ ಅಕ್ಬರ್ ಎನ್ನುವರರು ಬಾಡಿಗೆಗೆ ಇದ್ದರು. ಗುರುವಾರ ಸ್ನಾನದ ಮನೆಯಲ್ಲಿ ನೀರು ಕಾಯಿಸುತ್ತಿರುವಾಗ ಮನೆಯ ಅಟ್ಟದ ಹಲಗೆ ಮತ್ತು ತೀರಿಗೆ ಬೆಂಕಿ ತಗುಲಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಸಾರ್ವಜನಿಕರು ಬೆಂಕಿ ಆರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮನೆಯೊಳಗೆ ಇದ್ದ ಅಡಿಗೆ ಅನಿಲ ಸಿಲಿಂಡರ್ ಹೊರತೆಗೆದಿದ್ದಾರೆ. ಒಂದೇ ಕಟ್ಟಡದ ಹಿಂದೆ ಮುಂದೆ ಎರಡು ಕುಟುಂಬಗಳು ವಾಸವಿದ್ದವು. ಎರಡೂ ಮನೆಯಲ್ಲಿದ್ದ ಎಲ್ಲ ವಸ್ತುಗಳು ಭಸ್ಮವಾಗಿವೆ.