ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಅಗ್ನಿಶಾಮಕ ಠಾಣೆ: ಬೇಡಿಕೆಗಿಲ್ಲ ಸ್ಪಂದನೆ

ಹುಳಿಯಾರು ಭಾಗದಲ್ಲಿ ಪ್ರತಿ ವರ್ಷವೂ ಹೆಚ್ಚುತ್ತಿದೆ ಬೆಂಕಿ ಅವಘಡ: ತಾಲ್ಲೂಕು ಕೇಂದ್ರದಿಂದಲೂ ದೂರ
ಆರ್.ಸಿ.ಮಹೇಶ್
Published 12 ಫೆಬ್ರುವರಿ 2024, 7:17 IST
Last Updated 12 ಫೆಬ್ರುವರಿ 2024, 7:17 IST
ಅಕ್ಷರ ಗಾತ್ರ

ಹುಳಿಯಾರು: ಅತಿ ಹೆಚ್ಚು ಬೆಂಕಿ ಅವಘಡ ಸಂಭವಿಸುವ ಹುಳಿಯಾರು ಭಾಗಕ್ಕೆ ಅಗತ್ಯವಾಗಿ ಅಗ್ನಿಶಾಮಕ ಠಾಣೆ ಬೇಕು ಎಂಬ ಸಾರ್ವಜನಿಕರ ಕೂಗು ಪ್ರತಿ ಬೇಸಿಗೆಯಲ್ಲಿ ಕೇಳಿ ಬರುತ್ತಿದೆಯಾದರೂ, ಅದಕ್ಕೆ ಸ್ಪಂದನೆ ದೊರೆತಿಲ್ಲ.

ಜಿಲ್ಲೆಯಲ್ಲಿ ಅತಿ ದೊಡ್ಡ ಹೋಬಳಿ ಕೇಂದ್ರವಾಗಿ ಎರಡು ಹೆದ್ದಾರಿಗಳು ಹಾದು ಹೋಗುವ, ಮೂರು ಜಿಲ್ಲೆ, ನಾಲ್ಕು ತಾಲ್ಲೂಕು ಸಂಧಿಸುವ ಕೇಂದ್ರ ಬಿಂದುವಾಗಿದೆ. ಅತಿ ಹೆಚ್ಚು ಭೂ ಪ್ರದೇಶ ಹೊಂದಿರುವ ಹುಳಿಯಾರು ಜಿಲ್ಲೆಯ ಗಡಿ ಪ್ರದೇಶವೂ ಹೌದು. ಹೋಬಳಿಯ ದಸೂಡಿ, ಬೆಳ್ಳಾರ, ಕೆಂಕೆರೆ, ದೊಡ್ಡಹುಲ್ಲೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ತಾಲ್ಲೂಕು ಕೇಂದ್ರದಿಂದ 50 ಕಿ.ಮೀ ನಷ್ಟು ಅಂತರವಿದೆ.

ಗಡಿ ಭಾಗಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಿಂದ ವಾಹನ ಹೋಗಲು ಒಂದು ಗಂಟೆ ಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚು ತೆಂಗಿನ ತೋಟ, ಬಣವೆಗಳು, ತೋಟದ ಮನೆ, ಅರಣ್ಯ ಹಾಗೂ ಗುಡ್ಡಗಳಿವೆ. ಸಾಮಾನ್ಯವಾಗಿ ಡಿಸೆಂಬರ್‌ ಕಳೆಯುತ್ತಿದ್ದಂತೆ ಗುಡ್ಡಗಳಿಗೆ ಬೀಳುವ ಬೆಂಕಿ ಗುಡ್ಡದ ಬುಡದಲ್ಲಿರುವ ಹೊಲದ ಬದುಗಳ ಮೂಲಕ ತೋಟದ ಮನೆ, ಅಲ್ಲಿರುವ ಕಾಯಿ, ಕೊಬ್ಬರಿ, ಬಣವೆ, ತೆಂಗಿನ ತೋಟಗಳಿಗೂ ಹಾನಿಯಾಗುತ್ತದೆ.

ಹೆಚ್ಚು ಪ್ರಕರಣ: ಕಳೆದ ಮೂರು ವರ್ಷಗಳಲ್ಲಿ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಸಂಭವಿಸಿರುವ ಬೆಂಕಿ ಅವಘಡಗಳ ಅಂಕಿ-ಅಂಶ ಗಮನಿಸಿದಾಗ ಹೆಚ್ಚು ಪ್ರಕರಣ ದಾಖಲಾಗಿವೆ. 2022, 23, 24ರಲ್ಲಿ ಸಂಭವಿಸಿದ 590 ಬೆಂಕಿ ಅವಘಡಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಹುಳಿಯಾರು ಭಾಗಕ್ಕೆ ಸೇರಿವೆ.

ಹಂದನಕೆರೆ ಭಾಗಕ್ಕೂ ಅನುಕೂಲ: ಹಂದನಕೆರೆ ಹೋಬಳಿಯಲ್ಲಿಯೂ ಪ್ರತಿವರ್ಷ ಹೆಚ್ಚು ಬೆಂಕಿ ಅವಘಡ ಸಂಭವಿಸುತ್ತಿವೆ. ಹಂದನಕೆರೆ ಹೋಬಳಿ ದೊಡ್ಡಎಣ್ಣೇಗೆರೆ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ತಾಲ್ಲೂಕು ಕೇಂದ್ರ 40ಕ್ಕೂ ಹೆಚ್ಚು ಕಿ.ಮೀ ದೂರವಿರುವುದರಿಂದ ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ. ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶವೂ ತಾಲ್ಲೂಕು ಕೇಂದ್ರಕ್ಕೆ ದೂರವಾಗುತ್ತದೆ. ಹುಳಿಯಾರಿನಲ್ಲಿ ಠಾಣೆ ಸ್ಥಾಪಿಸಿದರೆ ಅನುಕೂಲ. ಹೋಬಳಿಯು ಹೊಸದುರ್ಗ, ಹಿರಿಯೂರು, ಅರಸೀಕೆರೆ, ತಿಪಟೂರು ತಾಲ್ಲೂಕುಗಳ ಗಡಿಗೆ ಹೊಂದಿಕೊಂಡಿರುವುದರಿಂದ ಅಲ್ಲಿನ ಜನರಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಒಂದೇ ವಾಹನ: ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ಠಾಣೆಯಲ್ಲಿರುವ ಎರಡು ವಾಹನಗಳಲ್ಲಿ 15 ವರ್ಷಗಳ ಹಳೆಯದಾದ ಒಂದು ವಾಹನವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಸದ್ಯಕ್ಕೆ ಒಂದೇ ಒಂದೇ ವಾಹನವಿದ್ದು, ಇಡೀ ತಾಲ್ಲೂಕನ್ನು ಬೆಂಕಿ ಅವಘಡಗಳಿಂದ ತಪ್ಪಿಸುವುದು ಅಸಾಧ್ಯವಾಗಿದೆ. 24 ಮಂದಿ ಸಿಬ್ಬಂದಿ ಇರುವೆಡೆ 18 ಸಿಬ್ಬಂದಿಯಷ್ಟೇ ಇದ್ದು, ಒಂದಿಬ್ಬರು ರಜೆ ಹೋದರೆ ಮತ್ತಷ್ಟು ಕೊರತೆಯಾಗುತ್ತದೆ.

ಜಿ.ಟಿ.ಜಯದೇವಪ್ಪ
ಜಿ.ಟಿ.ಜಯದೇವಪ್ಪ
ಕೆ.ಮರಿಯಪ್ಪ
ಕೆ.ಮರಿಯಪ್ಪ
ಪಾತ್ರೆ ಪರಮೇಶ್‌
ಪಾತ್ರೆ ಪರಮೇಶ್‌
ಕೆಂಕೆರೆ ಸತೀಶ್
ಕೆಂಕೆರೆ ಸತೀಶ್
ಬಿ.ಎನ್.ಲೋಕೇಶ್‌
ಬಿ.ಎನ್.ಲೋಕೇಶ್‌

ಕಷ್ಟಪಟ್ಟರೂ ಬೈಗುಳ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಅಗ್ನಿ ಅನಾಹುತ ಸಂಭವಿಸುತ್ತಿರುವ ಕಾರಣ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇವೆ. ಆದರೆ ತಾಲ್ಲೂಕು ವ್ಯಾಪ್ತಿ ದೊಡ್ಡದಾಗಿರುವುದರಿಂದ ತುರ್ತಾಗಿ ಘಟನೆ ಸ್ಥಳ ತಲುಪುವುದು ಕಷ್ಟ. ಕೆಲವೊಮ್ಮೆ ಕಷ್ಟಪಟ್ಟು ಸ್ಥಳಕ್ಕೆ ಹೋದಾಗಲೂ ಜನರಿಂದ ಬೈಗುಳ ಕೇಳಬೇಕಾಗುತ್ತದೆ. ಜಿ.ಹನುಮಂತಯ್ಯ ಪ್ರಭಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಿಕ್ಕನಾಯಕನಹಳ್ಳಿ ವಿಶಾಲ ಭೂ ಪ್ರದೇಶ ತಾಲ್ಲೂಕು ವ್ಯಾಪ್ತಿ ದೊಡ್ಡದಾಗಿದ್ದು ಹುಳಿಯಾರಿನಲ್ಲಿ ವಿಶಾಲ ಭೂ ಪ್ರದೇಶವಿದೆ. ಗಾಣಧಾಳು ಗ್ರಾಮ ಪಂಚಾಯಿತಿ ಗಡಿ ಭಾಗವಾಗಿದ್ದು ಅಗ್ನಿ ಅವಘಡಗಳು ಸಂಭವಿಸಿ ಸಂಪೂರ್ಣ ಸುಟ್ಟು ಹೋದರೂ ವಾಹನ ಬರುವುದಿಲ್ಲ. ತುರ್ತಾಗಿ ಹುಳಿಯಾರು ಭಾಗಕ್ಕೆ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕು. ಜಿ.ಟಿ.ಜಯದೇವಪ್ಪ ಗಾಣಧಾಳು ದಸೂಡಿ ಅರಣ್ಯ ಪ್ರದೇಶ ದಸೂಡಿ ಜಿಲ್ಲೆಯ ಗಡಿ ಪ್ರದೇಶವಾಗಿದ್ದು ಗುಡ್ಡ ಹಾಗೂ ಅರಣ್ಯ ಪ್ರದೇಶವನ್ನು ಹೊಂದಿದೆ. ಅರಣ್ಯಕ್ಕೆ ಬಿದ್ದ ಬೆಂಕಿ ಬಹು ಬೇಗ ಗ್ರಾಮಗಳತ್ತ ರೈತರ ಹೊಲಗಳತ್ತ ವ್ಯಾಪಿಸುತ್ತದೆ. 55 ಕಿ.ಮೀ ದೂರದಿಂದ ವಾಹನ ಬಹುವುದು ತಡವಾಗುತ್ತದೆ. ಕೆ.ಮರಿಯಪ್ಪ ಗ್ರಾ.ಪಂ.ಸದಸ್ಯ ದಸೂಡಿ ಹತ್ತಿರದಲ್ಲಿ ಠಾಣೆಯಿದ್ದರೆ ಅನುಕೂಲ ಯಳನಡು ಭಾಗವೂ ತಾಲ್ಲೂಕು ಕೇಂದ್ರದಿಂದ ದೂರದಲ್ಲಿದೆ. ಸಿಲಿಂಡರ್‌ ಸ್ಫೋಟ ಸೇರಿದಂತೆ ವಿದ್ಯುತ್‌ ಅವಘಡ ಸಂಭವಿಸಿದರೆ ದೂರದಿಂದ ವಾಹನ ಬರುವಷ್ಟರಲ್ಲಿ ಗ್ರಾಮದ ಒಂದು ಬೀದಿಯೇ ಬೆಂಕಿಗೆ ಆಹುತಿಯಾಗುತ್ತದೆ. ಹತ್ತಿರದಲ್ಲಿ ಠಾಣೆಯಿದ್ದರೆ ಹೆಚ್ಚು ಪ್ರಯೋಜನವಾಗುತ್ತದೆ. ಪರಮೇಶ್‌ ಕೆರೆಸೂರಗೊಂಡನಹಳ್ಳಿ ಠಾಣೆ ಅವಶ್ಯಕ ಬೇರೆ ಬೇರೆ ಕಾರ್ಯಗಳಿಗೆ ಹಣ ಖರ್ಚು ಮಾಡುವ ಸರ್ಕಾರ ಅಗತ್ಯ ಸವಲತ್ತು ನೀಡುವಲ್ಲಿ ವಿಫಲವಾಗುತ್ತಿವೆ. ಬೆಂಕಿ ಅವಘಡಗಳನ್ನು ತಪ್ಪಿಸಲು ಹುಳಿಯಾರು ಭಾಗಕ್ಕೆ ಅಗ್ನಿಶಾಮಕ ಠಾಣೆ ಅವಶ್ಯಕವಾಗಿದೆ. ಕೆಂಕೆರೆ ಸತೀಶ್‌ ರೈತ ಸಂಘದ ಉಪಾಧ್ಯಕ್ಷ ತೆನೆಭರಿತ ಹುಲ್ಲು ನಾಶ ತಿಮ್ಮನಹಳ್ಳಿ ಭಾಗದಲ್ಲಿ ಗುಡ್ಡ ಪ್ರದೇಶವಿದ್ದು ಬೇಸಿಗೆಯಲ್ಲಿ ಗುಡ್ಡಗಳು ಹೊತ್ತಿ ಉರಿಯುತ್ತವೆ. ಎಷ್ಟೋ ಬಾರಿ ರೈತರು ತಮ್ಮ ಜಮೀನುಗಳಲ್ಲಿ ಶೇಖರಣೆ ಮಾಡಿದ್ದ ತೆನೆಭರಿತ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಆಕಸ್ಮಿಕವಾಗಿ ಬೆಂಕಿ ಬಿದ್ದಾಗ ರಕ್ಷಿಸಲು ಅಗ್ನಿಶಾಮಕ ಠಾಣೆ ಅವಶ್ಯಕತೆ ಈ ಭಾಗಕ್ಕೆ ಇದೆ. ಬಿ.ಎನ್.ಲೋಕೇಶ್ ಬಡಕೆಗುಡ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT